
ಹಾಸನ : ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ರಜೆಯ ನಿಮಿತ್ತ ಊರಿಗೆ ಬಂದಿದ್ದ ತಾಲ್ಲೂಕಿನ ಉಣ್ಣೆನಹಳ್ಳಿಯ ಯೋಧ ಸಹೋದರರಾದ ಸುದರ್ಶನ್ ಹಾಗೂ ಮಧುಕುಮಾರ್, ದಿಢೀರ್ ಕರೆಯ ಮೇರೆಗೆ ರಜೆ ಮೊಟಕುಗೊಳಿಸಿ, ಕರ್ತವ್ಯಕ್ಕೆ ತೆರಳಿದರು.
ಕೆಲ ತಿಂಗಳ ನಂತರ ತಮ್ಮ ಹಕ್ಕಿನ ರಜೆ ಪಡೆದು ಗ್ರಾಮದ ಬಸವೇಶ್ವರ ದೇವಾಲಯ ಉದ್ಘಾಟನೆ ಹಾಗೂ ಬಂಧುಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಕೆಲದಿನ ವಿಶ್ರಾಂತಿ ಪಡೆದು ಹೋಗುವ ಯೋಚನೆಯಲ್ಲಿದ್ದರು.
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಕರ್ತವ್ಯಕ್ಕೆ ಮರಳಲು ಆದೇಶಿಸಿದ್ದರು.
ಕೂಡಲೆ ಸಂತೋಷದಿಂದ ಸೇನೆಗೆ ಮರಳಲು ಸಿದ್ಧರಾದ ಯೋಧ ಸಹೋದರರನ್ನು ಕುಟುಂಬದ ಸದಸ್ಯರು, ಗ್ರಾಮಸ್ಥರು, ಬಂಧು ಮಿತ್ರರು ಶುಭ ಹಾರೈಸಿ ಬೀಳ್ಕೊಟ್ಟರು.
ಯೋಧ ಸಹೋದರರು ನಗುಮೊಗದಿಂದ ಕರ್ತವ್ಯಕ್ಕೆ ಮರಳಿದರು.