ಉಡುಪಿ: 108 ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ 3 ತಿಂಗಳಿನಿಂದ ಸರಕಾರ ವೇತನ ನೀಡಿಲ್ಲ. 3 ತಿಂಗಳ ವೇತನ ಪಾವತಿಯಾಗದೇ ಸಾಕಷ್ಟು ತೊಂದರೆಯಾಗಿದೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕೊಟ್ರಪ್ಪ ಜಿ ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ರೀತಿ ಸುಮಾರು 4ರಿಂದ 5 ವರ್ಷದಿಂದಲೂ ವೇತನ ವಿಚಾರವಾಗಿ 108 ಸಿಬ್ಬಂದಿ ತೊಂದರೆ ಅನುಭವಿಸುತ್ತಾ ಬಂದಿದ್ದೇವೆ. ಹತ್ತು ದಿನಗಳೊಳಗೆ ಬಾಕಿ ವೇತನ ಪಾವತಿ ಆಗದಿದ್ದರೆ ರಾಜ್ಯ ಸಂಘದ ತೀರ್ಮಾನದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಸರ್ಕಾರ ಮತ್ತು ಜಿ.ವಿ.ಕೆ ಸಂಸ್ಥೆಯ ಒಡಂಬಡಿಕೆಯ ಪ್ರಕಾರ ವಾರ್ಷಿಕ ವೇತನ ಹೆಚ್ಚಳ ಆಗಬೇಕಾಗಿದ್ದು, 2023ರ ಶೇ.15ರಷ್ಟು ವೇತನ ಪರಿಷ್ಕರಣೆ ಕೂಡ ಆಗಿಲ್ಲ. ಹಾಗೆಯೇ ಕನಿಷ್ಟ ವೇತನ ಜಾರಿ ಆಗಿ 108 ಸಿಬ್ಬಂದಿಗೆ ವೇತನವನ್ನು ರೂ.36008ಗೆ ವೇತನ ನಿಗದಿಯಾಗಿದೆ. ಈ ವೇತನವನ್ನು ಸುಮಾರು 6 ತಿಂಗಳುಗಳ ಕಾಲ ನೀಡಿ, ನಂತರ ಏಕಾಏಕಿ 6000 ರೂ.ಗಳನ್ನು ಕಡಿತ ಮಾಡಿ 30,000 ರೂಗಳನ್ನು ನೀಡುತ್ತಿದ್ದಾರೆ. ಆರೋಗ್ಯ ಸಚಿವರು ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಬಾಕಿ ಇರುವ 4 ತಿಂಗಳ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಕಿಶೋರ್ ಕುಮಾರ್, ಶಾಂತಗೌಡ, ವಿಶ್ವನಾಥ್ ಇದ್ದರು.