ಕೇರಳದಲ್ಲಿ ಇಡ್ಲಿ ತಿಂದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಆ ವ್ಯಕ್ತಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚು ಇಡ್ಲಿಯನ್ನು ತಿನ್ನಬೇಕಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ, ಇಡ್ಲಿ ವ್ಯಕ್ತಿಯ ಎದೆಯಲ್ಲಿ ಸಿಲುಕಿಕೊಂಡಿದ್ದು ಉಸಿರಾಡಲು ತೊಂದರೆಯಾಗಿ ನಿಧನರಾಗಿದ್ದಾರೆ. ಹಾಗಾದರೆ ಅತಿಯಾಗಿ ಅದರಲ್ಲಿಯೂ ವೇಗವಾಗಿ ತಿನ್ನುವುದರಿಂದ ಸಾವು ಬರುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಈ ಬಗ್ಗೆ ಸಫ್ದರ್ಜಂಗ್ ಆಸ್ಪತ್ರೆಯ ಡಾ. ಜುಗಲ್ ಕಿಶೋರ್ ಎಂಬುವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು “ಒಮ್ಮೆಲೇ ಹೆಚ್ಚು ಆಹಾರವನ್ನು ಸೇವಿಸುವುದು ಮಾರಕ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಅವಸರದಲ್ಲಿ ಆಹಾರವನ್ನು ಸೇವಿಸಿದಾಗ ಅಥವಾ ತಿನ್ನುವಾಗ ಹೆಚ್ಚು ಮಾತನಾಡಿದಾಗ, ಆಹಾರವು ಉಸಿರಾಟದ ನಾಳದಲ್ಲಿ ಸಿಲುಕುವ ಅಪಾಯವಿದೆ. ಏಕೆಂದರೆ ನೀವು ಆಹಾರವನ್ನು ನುಂಗಿದಾಗ, ಈ ಸಮಯದಲ್ಲಿ ಶ್ವಾಸನಾಳವು ತನ್ನನ್ನು ತಾನೇ ಮುಚ್ಚಿಕೊಳ್ಳುತ್ತದೆ, ಆಹಾರವು ಉಸಿರಾಟದ ನಾಳಕ್ಕೆ ಹೋಗುವುದಿಲ್ಲ, ಆಹಾರ ಕೊಳವೆಯ ಮೂಲಕ ಹೊಟ್ಟೆಗೆ ಹೋಗುತ್ತದೆ. ಆದರೆ ಒಬ್ಬ ವ್ಯಕ್ತಿಯು ಆಹಾರವನ್ನು ತ್ವರಿತವಾಗಿ ಸೇವಿಸಿದಾಗ, ಕೆಲವು ಸಂದರ್ಭಗಳಲ್ಲಿ ಶ್ವಾಸನಾಳ ಮುಚ್ಚಲು ಅವಕಾಶ ಸಿಗುವುದಿಲ್ಲ ಹಾಗಾಗಿ ಆಹಾರವು ಈ ಟ್ಯೂಬ್ನಲ್ಲಿ (ಗಾಳಿಯ ಪೈಪ್) ಸಿಲುಕಿಕೊಳ್ಳುತ್ತದೆ” ಎಂದಿದ್ದಾರೆ.
ಶ್ವಾಸನಾಳದಲ್ಲಿ ಆಹಾರವು ಸಿಲುಕಿಕೊಂಡಾಗ ಸಾವು ಹೇಗೆ ಸಂಭವಿಸುತ್ತದೆ?
ನಾವು ತಿಂದ ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡಾಗ, ದೇಹದಲ್ಲಿನ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ. ಕಿಶೋರ್ ಹೇಳುತ್ತಾರೆ. ಏಕೆಂದರೆ ಆಹಾರವು ಸಿಕ್ಕಿಹಾಕಿಕೊಳ್ಳುವುದರಿಂದ ಉಸಿರಾಟದಲ್ಲಿ ತೊಂದರೆ ಉಂಟಾಗುತ್ತದೆ. ಒಂದರಿಂದ ಎರಡು ನಿಮಿಷಗಳ ಕಾಲ ಉಸಿರಾಟವಿಲ್ಲದಿದ್ದರೆ, ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದನ್ನು ಮೀರಿ ವಿಳಂಬವಾದರೆ, ಉಸಿರುಗಟ್ಟುವಿಕೆ ಪ್ರಾರಂಭವಾಗುತ್ತದೆ ಮತ್ತು ವ್ಯಕ್ತಿಯು ಸಾಯಬಹುದು. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಆಸ್ಪಿರೇಟ್ ಎಂದು ಕರೆಯಲಾಗುತ್ತದೆ.