ಸಿಎಂ ಸಿದ್ದು ಪತ್ನಿ ಹಾದಿಯನ್ನೇ ತುಳಿದ್ರಾ ಖರ್ಗೆ ಪುತ್ರ..!? ಕೆಐಎಡಿಬಿ ಸೈಟ್ ವಾಪಸ್ ನೀಡಲು ಸಿದ್ಧತೆ

Share with

ಬೆಂಗಳೂರು: ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದ ಟ್ರಸ್ಟ್​ಗೆ ಕೆಐಎಡಿಬಿಯಿಂದ 5 ಎಕರೆ ಭೂಮಿಯನ್ನು ನೀಡಲಾಗಿತ್ತು. ಬೆಂಗಳೂರಿನ ಏರೋಸ್ಪೇಸ್ ಬಳಿ ಭೂಮಿ ಮಂಜೂರು ಮಾಡಿದ್ದ ಕೆಐಎಡಿಬಿ. ಆದರೆ ಈಗ ಭೂಮಿ ನೀಡಿದ ಕ್ರಮ ವಿವಾದದ ಸ್ವರೂಪ ಪಡೆದ ಹಿನ್ನೆಲೆ, ಸಿದ್ದಾರ್ಥ ವಿಹಾರ್ ಟ್ರಸ್ಟ್​ಗೆ ನೀಡಲಾದ 5 ಎಕರೆ ಕೆಐಎಡಿಬಿ ಭೂಮಿಯನ್ನು ಕೆಐಎಡಿಬಿಗೆ ಹಿಂದಿರುಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಟ್ರಸ್ಟ್ ಕೆಐಎಡಿಬಿಗೆ ಪತ್ರ ಬರೆದು ಆಡಳಿತಾತ್ಮಕ ಕ್ರಮಕ್ಕೆ ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಮುಡಾ ಸೈಟ್​ ವಾಪಸ್​ ನೀಡಿದ ಬೆನ್ನಲ್ಲೇ ಖರ್ಗೆ ಕುಟುಂಬ ಸಿಎ ಸೈಟ್​ ಹಿಂದಿರುಗಿಸಲು ಚಿಂತನೆ ನಡೆಸಿದ್ದಾರೆ. 15 ದಿನಗಳ ಹಿಂದೆಯೇ ಭೂಮಿ ವಾಪಸ್ ಕೊಡಲು ಚಿಂತನೆ ನಡೆಸಿದ್ದಾರೆ. ಅಲ್ಲದೆ, ಪ್ರಿಯಾಂಕ್​ ಖರ್ಗೆ, ಭೂಮಿ ವಾಪಸ್ ಕ್ರಮದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಭೂಮಿ ವಾಪಸ್ ಪಡೆಯುವ ಮುನ್ನ ಕೆಐಎಡಿಬಿ ಆಡಳಿತ ಮಂಡಳಿ ಸಭೆ ನಡೆಯಬೇಕು, ಬಳಿಕ ಸರ್ಕಾರದ ಅನುಮತಿ ಪಡೆದು ಭೂಮಿ ಹಂಚಿಕೆ ರದ್ದು ಮಾಡಬೇಕು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಹಾಗೂ ಕೆಐಎಡಿಬಿ ಕಾನೂನಾತ್ಮಕ ಅಂಶಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಿಯಾಂಕ್​ ಖರ್ಗೆ, ನಮಗೆ ಕೊಟ್ಟ ಸಿಎ ಸೈಟ್ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ರಾಜಕೀಯದಿಂದ ಬೇಸರವಾಗಿ ಸಿಎ ಸೈಟ್ ಬೇಡವೆಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಅಲ್ಲದೆ, ಸೈಟ್​ ವಾಪಸ್​ ಕೊಡೋದಾಗಿ ಸ್ಪಷ್ಟ ಪಡಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷರನ್ನೇ ಕೇಳಿ ಎನ್ನುವ ಮೂಲಕ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ. ಒಟ್ಟಿನಲ್ಲಿ ಸಿಎಂ ಬೆನ್ನಲ್ಲೇ ಅಕ್ರಮದ ತೂಗುಕತ್ತಿಯಿಂದ ತಪ್ಪಿಸಿಕೊಳ್ಳೋಕೆ ಖರ್ಗೆ ಕುಟುಂಬ ಕೂಡ ಸೈಟ್​ ವಾಪಸ್​ ಮಾಡೋಕೆ ನಿರ್ಧರಿಸಿದ್ದು. ಇದು ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆಯಾ ಅನ್ನೋ ಅನುಮಾನಗಳು ಕೂಡ ದಟ್ಟವಾಗಿವೆ.


Share with

Leave a Reply

Your email address will not be published. Required fields are marked *