ಉಪ್ಪಳ: 62ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ನವಂಬರ್ 7 ರಿಂದ 10 ರ ತನಕ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ಜರಗಲಿದ್ದು ಈ ಕುರಿತು ಶಾರದಾ ಬೋವೀಸ್ ಶಾಲೆ ಐಲದಲ್ಲಿ ಪತ್ರಿಕಾಗೋಷ್ಠಿಯನ್ನು ಶುಕ್ರವಾರ ಕರೆಯಲಾಯಿತು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಿತೇಂದ್ರ ಮಾತನಾಡಿ ” ಧರ್ಮತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ ಈ ಉತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ನಗರ ಪ್ರದೇಶದಿಂದ ದೂರವಿರುವ ಈ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮವು ಯಶಸ್ವಿಗೊಳ್ಳುವಲ್ಲಿ ಎಲ್ಲರೂ ಯಥಾಸಾಧ್ಯ ತನು, ಮನ ಧನಗಳ ಸಹಕಾರವನ್ನು ಇತ್ತು ಸಹಕರಿಸಬೇಕೆಂದು” ವಿನಂತಿಸಿದರು.
ಜನರಲ್ ಕನ್ವೀನರ್ ರಾಮಚಂದ್ರ ಭಟ್ ಮಾತನಾಡಿ ” 120 ಕ್ಕೂ ಅಧಿಕ ಶಾಲೆಗಳಿಂದ 4000 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು 25 ವೇದಿಕೆಗಳಲ್ಲಿ ತಮ್ಮ ಪ್ರತಿಭಾಪ್ರದರ್ಶನವನ್ನು ಗೈಯಲಿದ್ದಾರೆ. ಸಂಸದರು, ಶಾಸಕರು ಮೊದಲ್ಗೊಂಡು ಅನೇಕ ಗಣ್ಯರು ಭಾಗವಹಿಸುವ ಈ ಉತ್ಸವವನ್ನು ವಿಜಯಗೊಳಿಸಿ ಅವಿಸ್ಮರಣೀಯಗೊಳಿಸಬೇಕೆಂದು” ಕರೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್, ಯು.ಪಿ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್, ಐಲ ಬೋವೀಸ್ ಶಾಲೆಯ ಮುಖ್ಯ ಶಿಕ್ಷಕಿ ಜಲಜಾಕ್ಷಿ ಎ, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರೋಗ್ರಾಂ ಕನ್ವೀನರ್ ಸತೀಶ್ ಕುಮಾರ್ ಶೆಟ್ಟಿ, ಫೈನಾನ್ಸ್ ಕನ್ವೀನರ್ ರಾಮಮೋಹನ್, ಪ್ರಚಾರ ಸಮಿತಿ ಕನ್ವೀನರ್ ಪ್ರದೀಪ್.ಕೆ ಉಪಸ್ಥಿತರಿದ್ದರು.