ಮಂಗಳೂರು: ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಅ.22ರಂದು ಅಂಬ್ಲಮೊಗರು ಗ್ರಾಮದ ತಿಲಕನಗರ ಎಂಬಲ್ಲಿ ಐಸಮ್ಮ ಎಂಬವರ ಹೋಂಡಾ ಡೀಯೋ ಕಳವು ಮಾಡಲಾಗಿತ್ತು ಹಾಗೂ ನ.16ರಂದು ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಬಳಿ ಗುಲಾಮ್ ಹುಸೇನ್ ಎಂಬವರ ಹೋಂಡಾ ಆಕ್ಟಿವಾ ವಾಹನ ಕಳವಾಗಿತ್ತು.
ಈ ಎರಡು ಪ್ರಕರಣದ ಆರೋಪಿಯನ್ನು ಕೊಣಾಜೆ ಪೊಲೀಸರು ಹುಡುಕುತ್ತಿದ್ದರು. ಡಿ.1 ರಂದು ಕೊಣಾಜೆ ಠಾಣಾ ಪಿ.ಎಸ್.ಐ ಅಶೋಕ್ ಅವರು ಸಿಬ್ಬಂದಿಗಳ ಜೊತೆ ಈ ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಆರೋಪಿ ಹುಸೇನ್ ಜಾಹೀದ್ನನ್ನು ಬಂಧಿಸಿ, ಕಳವು ಮಾಡಿದ ಸ್ಕೂಟರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಂತೆ ಡಿ.ಸಿ.ಪಿ ಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ ಧನ್ಯ ಎನ್ ನಾಯಕ್ ಅವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಬಾಲಕೃಷ್ಣ, ಪೊಲೀಸ್ ಉಪ ನಿರೀಕ್ಷಕರುಗಳಾದ ನಾಗರಾಜ್ ಎಸ್, ಪುನೀತ್ ಗಾಂವ್ಕರ್, ಅಶೋಕ್, ವಿನೋದ್, ಸಿಬ್ಬಂದಿಗಳಾದ ಸಂತೋಷ್ ಕೆ.ಸಿ, ಸುರೇಶ್ ತಳವಾರ್ ಪಾಲ್ಗೊಂಡಿದ್ದರು.
ಆರೋಪಿ ಉಳ್ಳಾಲ ತಾಲೂಕು ಬೆಳ್ಮ ನಿತ್ಯಾನಂದ ನಗರದ ಹುಸೈನ್ ಜಾಹೀದ್ (24) ನನ್ನು ಬಂಧಿಸಿ, 1 ಹೋಂಡಾ ಡೀಯೋ ಸ್ಕೂಟರ್, 1 ಹೋಂಡಾ ಆಕ್ಟಿವಾ, 1 ಸುಜೂಕಿ ಆಕ್ಸೇಸ್ ಸ್ಕೂಟರ್ ಸೇರಿದಂತೆ ಆತನಿಂದ ಒಟ್ಟು 68 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.