ಮೈಸೂರು: ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮದಲ್ಲಿ ಮೈಸೂರಿನ ಖಾಸಗಿ ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ. ಮುಂದಾಗುವ ಸಮಸ್ಯೆ ಅರಿತು ಈಗಲೇ ಪರಿಹಾರ ಮಾಡಿಕೊಂಡರೆ ಸೂಕ್ತ ಎಂಬ ಸಲಹೆಯನ್ನೂ ನೀಡಿದ್ದಾರೆ. ಯುದ್ಧಗಳು ಮುಂದುವರೆಯುತ್ತವೆ. ಮನಸ್ಸುಗಳಲ್ಲಿ ಶಾಂತಿ ನೆಲೆನಿಂತಾಗ ಮಾತ್ರ ಯುದ್ದ ನಿಲ್ಲುತ್ತದೆ. ಮುಂದೊಂದು ದಿನ ವಿಶ್ವವೇ ತಿರುಗಿ ನೋಡುವಂತಹ ಆಘಾತ ಭಾರತ ದೇಶಕ್ಕೆ ಕಾದಿದೆ ಎಂದು ಶ್ರೀಗಳು ಎಚ್ಚರಿಕೆ ಕೊಟ್ಟಿದ್ದಾರೆ.
ಮನುಷ್ಯ ಮೌನವಾಗಿದ್ದರೆ ಹೆಚ್ಚು ಜ್ಞಾನ ಸಂಪಾದನೆ ಮಾಡಬಹುದು. ಪ್ರಕೃತಿ ಹಾಗೂ ವೃಕ್ಷಗಳಿಗೆ ತನ್ನದೇ ಆದ ಅಗಾಧ ಶಕ್ತಿ ಇದೆ. ಮರಣ ಗೆಲ್ಲುವ ಶಕ್ತಿ ಗಿಡಮೂಲಿಕೆ ಔಷಧಿಗಳಲ್ಲಿದೆ. ತಾರಾ ವೃಕ್ಷಗಳಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗಲಿದೆ. ಅವು ದೈವ ವೃಕ್ಷಗಳಾಗಿವೆ. 84 ಲಕ್ಷ ಜೀವ ರಾಶಿಗಳಲ್ಲಿ ಆತ್ಮ ಕಡೆಯದಾಗಿದ್ದು, ಮಾನವನಿಗೆ ಜ್ಞಾನ ಹಾಗೂ ವಿವೇಕ ನೀಡಲಾಗಿದೆ. ಇದನ್ನು ಸನ್ಮಾರ್ಗದಲ್ಲಿ ಬಳಸಿಕೊಂಡಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ಶ್ರೀಗಳು ಕಿವಿಮಾತನ್ನೂ ಹೇಳಿದ್ದಾರೆ.