ಬುಲಂದ್ಶಹರ್: ತಾನು ರಕ್ಷಿಸಿದ ನಾಯಿಯಿಂದಲೇ ಕಬಡ್ಡಿ ಆಟಗಾರರೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ.
ನಾಯಿ ಕಡಿತದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವನ್ನಪ್ಪಿದ್ದಾರೆ.ಬ್ರಿಜೇಶ್ ಬೀದಿ ನಾಯಿಯೊಂದನ್ನು ರಕ್ಷಿಸಿದ್ದರು. ಆ ನಾಯಿ ಅವರಿಗೆ ಕಚ್ಚಿತ್ತು. ಆದರೆ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ರೇಬಿಸ್ ರೋಗಕ್ಕೆ ತುತ್ತಾಗಿ ಪ್ರಾಣಬಿಟ್ಟಿದ್ದಾರೆ.
ಅವರ ಕೊನೆಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೇಬಿಸ್ ರೋಗಕ್ಕೆ ತುತ್ತಾಗಿ ಹಾಸಿಗೆಯ ಮೇಲೆ ಮಲಗಿ ನೋವಿನಿಂದ ಒದ್ದಾಡುತ್ತಿರುವುದನ್ನು ವಿಡಿಯೋದಲ್ಲಿ ಕಂಡು ಬಂದಿದೆ.
ಮಾರ್ಚ್ನಲ್ಲಿ ನಾಯಿಯೊಂದು ಚರಂಡಿಗೆ ಬಿದ್ದಿತ್ತು. ಅದನ್ನು ರಕ್ಷಿಸುವ ಸಮಯದಲ್ಲಿ ಬಲಗೈಗೆ ಕಚ್ಚಿತ್ತು. ಅದನ್ನು ಸಣ್ಣ ಗಾಯವೆಂದು ಭಾವಿಸಿ, ನಿರ್ಲಕ್ಷಿಸಿದ್ದರು. ರೇಬಿಸ್ ಲಸಿಕೆಯನ್ನೂ ಪಡೆದಿರಲಿಲ್ಲ. ಕೊನೆಗೆ ಪ್ರಾಣಕ್ಕೆ ಮುಳುವಾಗಿದೆ.