ಕುಂಬಳೆ: ಬಂದ್ಯೋಡು ಪಂಜತ್ತೊಟ್ಟಿ ನಿವಾಸಿ ದುಬಾಯಿ ಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ನಿನ್ನೆ(ಡಿ.9) ರಾತ್ರಿ ಈ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ.

ಪಂಜತ್ತೊಟ್ಟಿಯ ಹಸೈನಾರ್-ಸಫಿಯಾ ದಂಪತಿಯ ಪುತ್ರ ಮುಹಮ್ಮದ್ ಶಫೀಕ್ (25) ಮೃತಪಟ್ಟ ವ್ಯಕ್ತಿ. ದುಬಾಯಿ ಪೋರ್ಟ್ ರಾಶಿದ್ ಸಮುದ್ರದಲ್ಲಿ ಇವರ ಮೃತದೇಹ ಪತ್ತೆಯಾಗಿರುವುದಾಗಿ ಸಂಬಂಧಿಕರಿಗೆ ಮಾಹಿತಿ ಲಭಿಸಿದೆ. ಬರ್ದುಬೈ ಎಂಬಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಮುಹ ಮ್ಮದ್ ಶಫೀಕ್ ಕೆಲಸ ಮಾಡುತಿದ್ದರು. ಎಂಟು ತಿಂಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಡಿಸೆಂಬರ್ 4ರಂದು ರಾತ್ರಿ ಮುಹಮ್ಮದ್ ಶಫೀಕ್ ಹಾಗೂ ಜೊತೆಗೆ ವಾಸಿಸುತ್ತಿದ್ದ ಮತ್ತಿಬ್ಬರ ಮಧ್ಯೆ ವಾಗ್ವಾದ ಉಂಟಾಗಿರುವುದಾಗಿ ಹೇಳಲಾಗುತ್ತಿದೆ. ಅನಂತರ ಕೆಳ ಮಹಡಿಯಲ್ಲಿರುವ ಶೌಚಾಲಯಕ್ಕೆ ಹೋದ ಮುಹಮ್ಮದ್ ಶಫೀಕ್ ಮರಳಿ ಬಂದಿಲ್ಲವೆಂದು ಹೇಳಲಾಗುತ್ತಿದೆ. ಅವರಿಗಾಗಿ ಶೋಧ ನಡೆಯುತ್ತಿರುವ ಮಧ್ಯೆ ಮೃತದೇಹ ಸಮುದ್ರದಲ್ಲಿ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತ ಯುವಕನ ಜೊತೆಗೆ ವಾಸಿಸುತ್ತಿದ್ದ ಇಬ್ಬರನ್ನು ದುಬಾಯಿ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿಗೆ ಕಾರಣವೇನೆಂದು ತಿಳಿದುಬರಲಿದೆ.




