ಯುಟ್ಯೂಬ್‌ ವಿಡಿಯೋಗಾಗಿ ನವಿಲು ಮಾಂಸದ ಕರಿ ಮಾಡಿದ್ದ ಯುಟ್ಯೂಬರ್‌ ಇದೀಗ ಪೊಲೀಸರ ಅತಿಥಿ

Share with

ನಮ್ಮ ರಾಷ್ಟ್ರ ಪಕ್ಷಿಯಾದ ನವಿಲನ್ನು ಕೊಲ್ಲುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಹೀಗಿದ್ರೂ ಕೂಡಾ ಕೆಲವೊಬ್ಬರು ಮಾಂಸಕ್ಕಾಗಿ ನವಿಲುಗಳನ್ನು ಸಾಯಿಸುತ್ತಾರೆ. ಮನುಷ್ಯನಿಗೆ ತಿನ್ನಲು ಕೋಳಿ, ಕುರಿ, ಮೇಕೆ ಮಾಂಸಗಳನ್ನು ಅನುಮತಿಸಲಾಗಿದೆ. ಆದರೆ ರಾಷ್ಟ್ರ ಪಕ್ಷಿಯಾದ ನವಿಲನ್ನು ಯಾವುದೇ ಕಾರಣಕ್ಕೂ ಸಾಯಿಸಲು ಅನುಮತಿಯಿಲ್ಲ, ಬದಲಾಗಿ ರಾಷ್ಟ್ರ ಪಕ್ಷಿ, ಪ್ರಾಣಿಗಳ ರಕ್ಷಣೆ ಮಾಡಬೇಕೆಂದು ಕಾನೂನು ಹೇಳುತ್ತದೆ. ಕಾನೂನಿನ ಕಿಂಚಿತ್ತೂ ಭಯವಿಲ್ಲದೆ ಇಂದಿಗೂ ಕೂಡಾ ನಮಿಲುಗಳನ್ನು ಮಾಂಸಕ್ಕಾಗಿ ಮಾರಣಹೋಮ ಮಾಡಲಾಗುತ್ತಿದೆ. ಹೀಗೆ ನವಿಲುಗಳನ್ನು ಕೊಂದವರು ಜೈಲು ಸೇರಿರುವ ಉದಾಹರಣೆಯೂ ಇದೆ. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ಯುಟ್ಯೂಬರ್‌ ಒಬ್ಬ ನವಿಲಿನ ಮಾಂಸದ ಸಾರಿನ ರೆಸಿಪಿಯನ್ನು ಮಾಡಿ ಯುಟ್ಯೂಬ್‌ ಚಾನೆಲ್‌ ಅಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಈ ಭೂಪನನ್ನು ಬಂಧಿಸಿದ್ದಾರೆ.

ಈ ಆಘಾತಕಾರಿ ಘಟನೆ ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿದ್ದು, ʼನವಿಲು ಕರಿ ರೆಸಿಪಿʼ ಕುರಿತು ವಿಡಿಯೋವನ್ನು ಯುಟ್ಯೂಬ್‌ ಚಾನೆಲ್‌ ಅಲ್ಲಿ ಹಂಚಿಕೊಂಡ ಆರೋಪದ ಮೇಲೆ ಯುಟ್ಯೂಬರ್‌ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸಿರ್ಸಿಲ್ಲಾದ ಕೊಡಂ ಪ್ರಣಯ್‌ ಕುಮಾರ್‌ ಎಂಬಾತ ನವಿಲು ಕರಿ ರೆಸಿಪಿಯ ವಿಡಿಯೋವನ್ನು ತನ್ನ ಯುಟ್ಯೂಬ್‌ ಚಾನೆಲ್‌ ಅಲ್ಲಿ ಹಂಚಿಕೊಂಡಿದ್ದನು.

ವಿಡಿಯೋ ಭಾರೀ ವೈರಲ್‌ ಆಗಿತ್ತು. ಇದಾದ ಬಳಿಕ ಈ ವಿಷಯ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದು, ಯುಟ್ಯೂಬರ್‌ ಪ್ರಣಯ್‌ ಕುಮಾರ್‌ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅರಣ್ಯಾಧಿಕಾರಿಗಳು ಆಗಸ್ಟ್‌ 11 ಭಾನುವಾರದಂದು ತಂಗಲ್ಲಪಲ್ಲಿಯಲ್ಲಿರುವ ಈತನ ನಿವಾಸಕ್ಕೆ ದಾಳಿ ನಡೆಸಿ, ಬಂಧಿಸಿದ್ದಾರೆ. ಬಳಿಕ ನವಿಲಿನ ಸಾರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದು ನಿಜವಾವಾಗಿಯೂ ನವಿಲು ಮಾಂಸವಾಗಿದ್ದರೆ ಪ್ರಣಯ್‌ ಕುಮಾರ್‌ ಗಂಭೀರ ಕಾನೂನು ಪರಿಣಾಮವನ್ನು ಎದುರಿಸಬಹುದು.


Share with

Leave a Reply

Your email address will not be published. Required fields are marked *