ಅಕ್ಷಯ ಕಾಲೇಜಿನಲ್ಲಿ – ‘ಸಾಹಿತ್ಯ ಚಿಲುಮೆ 2024’ ಕಾರ್ಯಕ್ರಮ

Share with

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “ಅದ್ವಯ ಸಾಹಿತ್ಯ ಸಂಘ” ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ    ಸಹಭಾಗಿತ್ವದಲ್ಲಿ, “ಸಾಹಿತ್ಯ  ಚಿಲುಮೆ 2024”  ಎಂಬ  ಶೀರ್ಷಿಕೆಯಡಿ, ಭಾಷಾ ವಿಭಾಗದ  ನೇತೃತ್ವದಲ್ಲಿ  ವಿಶೇಷ ಉಪನ್ಯಾಸ  ಕಾರ್ಯಕ್ರಮ  ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಡಾ| ವಿಜಯ್ ಕುಮಾರ್  ಎಂ  ಸಹಪ್ರಾಧ್ಯಾಪಕರು ಕನ್ನಡ ವಿಭಾಗ ಮತ್ತು  ಉಪ ಪ್ರಾಂಶುಪಾಲರು ಸಂತ ಫಿಲೋಮಿನ  ಕಾಲೇಜ್ ಪುತ್ತೂರು  ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ  ಕಾರ್ಯಾಗಾರ ನಡೆಸಿಕೊಟ್ಟರು.

ನಿರಂತರ ಓದುವಿಕೆ ಮತ್ತು ಬರವಣಿಗೆಯ ಹವ್ಯಾಸವು ಮಾತಿನ  ನಿಖರತೆ , ಸ್ಪಷ್ಟ ಉಚ್ಚಾರಣೆ, ನಿರರ್ಗಳತೆ, ಮತ್ತು  ಉತ್ತಮ ವಾಕ್ಚಾತುರ್ಯವನ್ನು  ಪ್ರೇರೇಪಿಸಿ  ಒಬ್ಬ ಅತ್ಯುತ್ತಮ ವಾಗ್ಮಿಯನ್ನಾಗಿ ಮಾಡಬಲ್ಲದು.  ಓದುವ  ಹವ್ಯಾಸ ನಮ್ಮ ಶಬ್ದಕೋಶವನ್ನು ವೃದ್ಧಿಸಿ ಉತ್ತಮ ಲೇಖಕನನ್ನಾಗಿ, ಸಾಹಿತಿಯನ್ನಾಗಿ ಮಾಡಬಲ್ಲದು. ಸಣ್ಣ ಪುಟ್ಟ ಕವಿತೆ, ಕಥೆ  ಬರೆದು ನಾವು ಹವ್ಯಾಸವನ್ನಾಗಿ ಬೆಳೆಸಿದಾಗ ನಮ್ಮನ್ನು ಸಾಹಿತ್ಯದ  ಕಂಪು ಒಂದು  ಹೊಸ  ಭಾವನಾತ್ಮಕ  ಪ್ರಪಂಚಕ್ಕೆ  ಕೊಂಡೊಯ್ದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸುವಂತೆ  ಮಾಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕು  ಎಂದು  ವಿದ್ಯಾರ್ಥಿಗಳಿಗೆ  ಮನದಟ್ಟು ಮಾಡಿದರು.  

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷ ರಾದ ಶ್ರೀ ಜಯಂತ್ ನಡುಬೈಲ್ ಮಾತನಾಡಿ, ಸಾಹಿತ್ಯ  ಕಲಾ ಸಂಗಮವಾದ “ಅದ್ವಯ ಸಾಹಿತ್ಯ ಸಂಘ”   ವಿದ್ಯಾರ್ಥಿಗಳ  ಸೃಜನಶೀಲ ಸಾಹಿತ್ಯ ಸೃಷ್ಟಿಗೆ ನಮ್ಮ ಕಾಲೇಜಿನ ವೇದಿಕೆಯಾಗಿದ್ದು, ಇದರ ಮೂಲಕ  ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ  ಸಮಾಜದಲ್ಲಿ  ವಿಶಿಷ್ಟ ವ್ಯಕ್ತಿಗಳಾಗಬೇಕು.    ಉತ್ತಮ ಸಾಹಿತಿಗಳಾಗಿ, ಲೇಖನಕಾರರಾಗಿ, ವಾಗ್ಮಿಗಳಾಗಿ, ಚಿತ್ರಕಲಾವಿದರಾಗಿ ಮುಂತಾದ  ಹಲವಾರು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮ ಅಭಿರುಚಿಗೆ  ಹೊಂದಿಕೊಂಡು  ತಮ್ಮನ್ನು ತಾವು  ಸಮಾಜಮುಖಿ  ಕಾರ್ಯಗಳಲ್ಲಿ  ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ ರವರು ಮಾತನಾಡಿ  ಭಾಷಾ ವಿಭಾಗದ   ಶಿಕ್ಷಕರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ  ಮತ್ತು  ನಿಕಟ ಸಂಪರ್ಕ ಹೊಂದಿರುವ ಗುರುಗಳಾಗಿರುವವರು. ವಿದ್ಯಾರ್ಥಿಗಳ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಗಳನ್ನು  ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಇವರ ಸೇವೆ ಅನನ್ಯ ಎಂದರು.  

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀ ದಯಾನಂದ ಸುವರ್ಣ ರವರು   “ ಸಾಹಿತ್ಯ  ಚಿಲುಮೆ 2024” ಭಾಗವಾಗಿ ಆಯೋಜಿಸಿದ್ದ  ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಚಿಸಿದರು. ವೇದಿಕೆಯ  ಗಣ್ಯ ವ್ಯಕ್ತಿಗಳು ಬಹುಮಾನವನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀ ಹರಿಶ್ಚಂದ್ರ ರವರು  ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು

ದ್ವಿತೀಯ ಪದವಿ ಫ್ಯಾಷನ್ ಡಿಸೈನ್ ವಿಭಾಗದ  ಕುಮಾರಿ ಪ್ರಕೃತಿ ಪ್ರಾರ್ಥನೆ ಹಾಡಿದರು.  ತೃತೀಯ ಪದವಿ ವಾಣಿಜ್ಯ ವಿಭಾಗದ ಕುಮಾರಿ  ಕ್ಷೇಮಾ ವಂದಿಸಿದರು. ಪ್ರಥಮ ಪದವಿ ಬಿ ಸಿ ಎ  ವಿಭಾಗದ ವಿದ್ಯಾರ್ಥಿನಿ  ಕುಮಾರಿ ಅಪೇಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.


Share with