ಮಲ್ಲ: ಮಲ್ಲ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವಕ್ಕೆ ನಿನ್ನೆ ರಾತ್ರಿ ಧ್ವಜಾರೋಹಣ ನಡೆಸಲಾಯಿತು. ತಂತ್ರಿ ಎಂ. ರಾಧೇಶ್ಯಾಂ ಭಟ್ ಧ್ವಜಾರೋಹಣ ನಡೆಸಿದರು. ಕ್ಷೇತ್ರದ ಆಡಳಿತ ಮೊಕ್ತಸರ ಆನೆಮಜಲು ಸತ್ಯನಾರಾಯಣ ಭಟ್ ಸಹಿತ ಹಲವರು ಉಪಸ್ಥಿತರಿದ್ದರು.

ಇಂದು ಬೆಳಿಗ್ಗೆ ಶ್ರೀ ಭೂತಬಲಿ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಪಾಲಕಿಸೇವೆ, ನೃತ್ಯ ನಡೆಯಲಿರುವುದು. ವಾರ್ಷಿಕ ಮಹೋತ್ಸವ ಮಾರ್ಚ್ 5ರಂದು ಬೆಳಿಗ್ಗೆ ಶ್ರೀ ಧೂಮಾವತಿ ದೈವದ ನೇಮದೊಂದಿಗೆ ಸಮಾಪ್ತಿಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಇಂದು ರಾತ್ರಿ 7ರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿಯವರಿಂದ ಯಕ್ಷಗಾನ ಬಯಲಾಟ, ನಾಳೆ ಸಂಜೆ 6.45ರಿಂದ ವಿದುಷಿ ಅಂಕಿತ ಬದಿಯಡ್ಕ-ತಪಸ್ಯ ನಾಟ್ಯಾಲಯ ಇವರಿಂದ ಭರತನಾಟ್ಯ ರಾತ್ರಿ 7.45ರಿಂದ ಶ್ರೀ ದುರ್ಗಾಂಭಾ ಭಜನಾ ಸಂಘ ಮಲ್ಲ ಇವರಿಂದ ಭಜನೆ ನಡೆಯಲಿದೆ.




