ನೈಋುತ್ಯ ಬಂಗಾಳಕೊಲ್ಲಿಯಲ್ಲಿ ಮತ್ತು ಶ್ರೀಲಂಕಾ ಕರಾವಳಿಯ ಸಮೀಪ ವಾಯುಭಾರ ಕುಸಿತವಾಗಿದ್ದು, ಇದು ತೀವ್ರತೆ ಪಡೆದುಕೊಳ್ತಿದೆ. ಇನ್ನು ಮುಂದಿನ ಕೆಲ ಗಂಟೆಗಳಲ್ಲಿ ಇದು ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ಹೊಸ ಚಂಡಮಾರುತಕ್ಕೆ ‘ಸೈಕ್ಲೋನ್ ದಿತ್ವಾಹ್’ ಎಂದು ಹೆಸರಿಡಲಾಗುತ್ತದೆ. ಈಗಾಗಲೇ ಶ್ರೀಲಂಕಾದಲ್ಲಿ ದಿತ್ವಾ ಅಬ್ಬರ ಶುರುವಾಗಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗ್ತಿದೆ. ಪರಿಣಾಮ ನದಿಗಳು ಉಕ್ಕಿ ಹರಿಯುತ್ತಿದ್ದ ಅವಾಂತರ ಸೃಷ್ಟಿಸಿದೆ.
ಶ್ರೀಲಂಕಾದಲ್ಲಿ ತಲ್ಲಣ ಸೃಷ್ಟಿಸಿರುವ ಸೈಕ್ಲೋನ್ ದಿತ್ವಾಹ್ ನವೆಂಬರ್ 30 ಅಂದ್ರೆ ಭಾನುವಾರ, ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ. ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಗಂಟೆಗೆ 80-90 ಕಿ.ಮೀ ವೇಗದ ಗಾಳಿ ಮತ್ತು ಅಲೆಗಳ ಅಬ್ಬರ ಕಂಡುಬರುವ ನಿರೀಕ್ಷೆಯಿದೆ.
ಇಂದು ಮತ್ತು ನಾಳೆ ಚೆನ್ನೈ, ನಾಗಪಟ್ಟಣಂ, ತಿರುವಳ್ಳೂರು, ತಂಜಾವೂರು ಸೇರಿದಂತೆ ತಮಿಳುನಾಡಿನ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೇಂಜ್ ಅಲರ್ಟ್ ನೀಡಲಾಗಿದೆ. ತಮಿಳುನಾಡು ಸಿಎಂ ಸ್ಟಾಲಿನ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಹಾಗೂ ಮುಂದಿನ ಐದು ದಿನಗಳವರೆಗೆ ಮೀನುಗಾರರು ಆಳ ಸಮುದ್ರಕ್ಕೆ ಇಳಿಯದಂತೆ ಸರ್ಕಾರ ಎಚ್ಚರಿಕೆ ನೀಡಿದೆ.
ಈ ದಿತ್ವಾಹ್ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲ ಜಿಲ್ಲೆಗಳ ಮೇಲೂ ಇರಲಿದೆ. ರಾಜಧಾನಿ ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಭಾಗಗಳಲ್ಲಿ ಭೀಕರ ಚಳಿ ಇರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.




