ಕೇರಳ: ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ನಕ್ಸಲ್ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಚಕಮಕಿಯಲ್ಲಿ ಇಬ್ಬರು ನಕ್ಸಲರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬಂಧಿತರನ್ನು ಶೃಂಗೇರಿ ಮೂಲದ ಶ್ರೀಮತಿ ಅಲಿಯಾಸ್ ಉನ್ನಿಮಾಯಾ ಹಾಗೂ ಕೇರಳ ಮೂಲದ ಚಂದ್ರು ಅಲಿಯಾಸ್ ತಿರುವೆಂದಿಗಮ್ ಎಂದು ಗುರುತಿಸಲಾಗಿದೆ.
ತಳಪ್ಪುಳ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾ ಪ್ರದೇಶದಲ್ಲಿ ಕೇರಳ ಪೊಲೀಸರ ವಿಶೇಷ ತಂಡಗಳು ಮತ್ತು ನಕ್ಸಲರ ನಡುವೆ ಚಕಮಕಿ ನಡೆದಿದ್ದು, ಐವರು ನಕ್ಸಲರ ಗುಂಪು ತಮ್ಮ ಮೊಬೈಲ್ ಫೋನ್ಗಳನ್ನು ಚಾರ್ಜ್ ಮಾಡಲು ಮನೆಯೊಂದರಲ್ಲಿ ಆಶ್ರಯ ಪಡೆದಾಗ ಈ ಘಟನೆ ಸಂಭವಿಸಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಮೂವರು ನಕ್ಸಲರು ತಪ್ಪಿಸಿಕೊಂಡಿದ್ದು, ಈ ವೇಳೆ ಚಂದ್ರು ಹಾಗೂ ಶ್ರೀಮತಿ ಅವರನ್ನು ಬಂಧಿಸಲಾಗಿದೆ. ಬಂಧಿತ ನಕ್ಸಲರನ್ನು ಹೆಚ್ಚಿನ ವಿಚಾರಣೆಗಾಗಿ ಸಮೀಪದ ಪೊಲೀಸ್ ಶಿಬಿರಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.