ಬಕೆಟ್ ಗೆ ಬಿದ್ದು ಮಗು ಮೃತ್ಯು..! ತಾಯಿ ಆತ್ಮಹತ್ಯೆ!!

Share with

ಒಣಹಾಕಿದ್ದ ಬಟ್ಟೆ ತರಲು ಹೋಗಿದ್ದವೇಳೆ ನೀರಿನ ಬಕೆಟ್‌ನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು ಇದನ್ನು ಕಂಡು ನೊಂದ ತಾಯಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯ ಭೈರವೇಶ್ವರ ನಗರದಲ್ಲಿ ಸಂಭವಿಸಿದೆ.

ಅಗಸ್ತ್ಯ ಮೃತ ಮಗು. ಪ್ರತಿಭಾ ಆತ್ಮಹತ್ಯೆಗೆ ಶರಣಾದ ತಾಯಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ತಾಯಿ, ಮಗು ಇಬ್ಬರೇ ಇದ್ದಾಗ ಘಟನೆ ಸಂಭವಿಸಿದೆ.

ಪ್ರತಿಭಾ ಮತ್ತು ಮಹಂತೇಶ್ ದಂಪತಿ ವೃತ್ತಿಯಲ್ಲಿ ಸಾಫ್ಟ್‌ವೇ‌ರ್ ಉದ್ಯೋಗಿಗಳು. ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಗಂಡ ಮಹಂತೇಶ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ರಾತ್ರಿ ಪತಿ ಮಹಂತೇಶ್ ಹಿಂದಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪತ್ನಿ ಬಾಗಿಲು ತೆರೆಯದೇ ಇದ್ದಾಗ ಮಹಂತೇಶ್ ತನ್ನ ಬಳಿ ಇದ್ದ ಇನ್ನೊಂದು ಕೀಲಿಯಿಂದ ಬಾಗಿಲು ತೆರೆದು ಒಳಗೆ ಬಂದು ನೋಡಿದಾಗ ಪ್ರತಿಭಾ ನೇಣಿಗೆ ಶರಣಾಗಿರುವುದು, ಮಗು ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ವೇಳೆ ಮಗು ಕೂಡ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಜೊತೆಗೆ ಪಕ್ಕದಲ್ಲಿ ಪತ್ನಿ ಬರೆದಿಟ್ಟ ಡೆತ್ ನೋಟ್ ಅದರ ಪಕ್ಕದಲ್ಲಿ ಖಾಲಿಯಾಗಿದ್ದ 15 ಮಾತ್ರೆ ಶೀಟ್ ಪತ್ತೆಯಾಗಿದೆ.

ನಾನು ಬಟ್ಟೆ ಒಣಹಾಕಿದ್ದು, ಅದನ್ನ ತರಲು ಟೆರೆಸ್‌ಗೆ ಹೋಗಿದ್ದೆ. ಈ ವೇಳೆ ಮಗು ಆಟ ಆಡಿಕೊಂಡು ಬಚ್ಚಲು ಮನೆಗೆ ಹೋಗಿದೆ. ಆ ವೇಳೆ ಬಕೆಟ್‌ನಲ್ಲಿ ಮುಳುಗಿ ಮಗು ಸತ್ತಿದೆ. ನನ್ನ ಮಗುವನ್ನು ಉಳಿಸಿಕೊಳ್ಳಲು ಆಗಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಪ್ರತಿಭಾ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ.

ಮೊದಲಿಗೆ ಪ್ರತಿಭಾ ಮಾತ್ರೆ ನುಂಗಿ, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ರಕ್ತ ಬಾರದ ಹಿನ್ನೆಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *