ಪುತ್ತೂರು: ಬನ್ನೂರು ಕೃಷ್ಣನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 13ರಂದು “ಶಾಲಾ ಪ್ರಥಮ ವಾರ್ಷಿಕ ಕ್ರೀಡೋತ್ಸವ” ಕಾರ್ಯಕ್ರಮ ನಡೆಸಲಾಯಿತು.


ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಪುತ್ತೂರು ನಗರ ಸಭೆಯ ಸದಸ್ಯರಾದ ಶ್ರೀಯುತ ಸುಂದರ ಪೂಜಾರಿ ಬಡವುರವರು ಆಗಮಿಸಿ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಸ್ಥೆಯ ಬಗ್ಗೆ ಅಭಿಮಾನದ ನುಡಿಗಳನ್ನಾಡಿದರು ಹಾಗೂ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಅತಿಥಿಯಾಗಿ ಆಗಮಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಮಾಧವ ಗೌಡ ಪೆರಿಯತ್ತೋಡಿಯವರು ಕ್ರೀಡಾಕೂಟಕ್ಕೆ ಶುಭ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎವಿಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದು ಅವರು ಮಾತನಾಡುತ್ತಾ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹದ ನುಡಿಗಳನ್ನು ಆಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಗುಡ್ಡಪ್ಪ ಗೌಡ ಬಲ್ಯರವರು ರಾಷ್ಟ್ರೀಯ ಯುವ ದಿನದ ಬಗ್ಗೆ ಮಾತನಾಡಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ನುಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀಯುತ ಎ.ವಿ. ನಾರಾಯಣ ಗೌಡ ಅವರು ಸ್ವಾಗತ ಕಾರ್ಯಕ್ರಮವನ್ನು ನೆರವೇರಿಸಿ ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಪ್ರತಿಭಾ ದೇವಿ ಅತಿಥಿಗಳ ಪರಿಚಯ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನಗರಸಭೆ ಸದಸ್ಯರಾದ ಶ್ರೀಮತಿ ಗೌರಿ ಬನ್ನೂರು, ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಉಷಕಿರಣ ಕೆ.ಎಸ್, ಸಹ ಶಿಕ್ಷಕಿಯಾದ ಶ್ರೀಮತಿ ವನಿತಾ, ಸಹಾಯಕರಾದ ಶ್ರೀಮತಿ ಭುವನೇಶ್ವರಿ ಹಾಗೂ ಶ್ರೀ ಆನಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಸಂಸ್ಥೆಯ ಪುಟಾಣಿ ಮಕ್ಕಳಾದ ಕು.ತನಿಷ್ಕ, ಕು.ಆನ್ವಿ, ಕು.ಶಿವಾನಿ ಪ್ರಾರ್ಥಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಉಮೇಶ್ ಗೌಡ ಮಳುವೇಲು ಧನ್ಯವಾದಗೈದರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಮಾಧವ ಗೌಡ ಪೆರಿಯತ್ತೋಡಿಯವರು ಕ್ರೀಡಾಕೂಟದ ನಿರ್ವಹಣೆ ಮಾಡಿದರು. ಸಂಸ್ಥೆಯ ಸಹ ಶಿಕ್ಷಕಿಯಾದ ಶ್ರೀಮತಿ ಯಶುಭ ರೈ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕ್ರೀಡಾಕೂಟದ ನಂತರ ಎಲ್ಲರಿಗೂ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.




