ಪುತ್ತೂರು: ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗ ಕಾಮಿಗಳಿದ್ದಾರೆ ಎನ್ನುವ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದು, ರಾಜ್ಯ ಸರಕಾರ ತತ್ ಕ್ಷಣ ಅವರನ್ನು ಹುದ್ದೆಯಿಂದ ಕಿತ್ತುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ‘ಬಿಳಿಮಲೆಯವರು ಯಕ್ಷಗಾನ ಕಲಾವಿದರಿಗೆ ಮಾತ್ರವಲ್ಲ,ಕರಾವಳಿ ಭಾಗಕ್ಕೆ ಮಾತ್ರವಲ್ಲ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಮನಸ್ಥಿತಿ. ಅವರಿಗೆ ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಪರಂಪರೆ ಕುರಿತಾಗಿ ಕಿಂಚಿತ್ ಗೌರವವಿದ್ದರೆ ಈ ಹೇಳಿಕೆ ನೀಡುತ್ತಿರಲಿಲ್ಲ”ಎಂದು ಕಿಡಿ ಕಾರಿದರು.
“ಹಿಂದೂ ಸಮಾಜಕ್ಕೆ ಅಪಮಾನವಾಗಿದ್ದು, ಬಿಜೆಪಿ ಮಾತ್ರವಲ್ಲ, ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ.ಸರಕಾರ ತತ್ ಕ್ಷಣ ಹುದ್ದೆಯಿಂದ ಕಿತ್ತು ಬಿಸಾಕಬೇಕು” ಎಂದು ಒತ್ತಾಯಿಸಿದ್ದಾರೆ.
ಆಕ್ರೋಶದ ಬಳಿಕ ಕ್ಷಮೆಯಾಚನೆ
ಯಕ್ಷಗಾನ ವಲಯ ಮಾತ್ರವಲ್ಲದೆ ರಾಜಕೀಯ ವಲಯದಿಂದಲೂ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಪುರುಷೋತ್ತಮ ಬಿಳಿ ಮಲೆಯವರು ಬುಧವಾರ ಮಾಧ್ಯಮಗಳ ಎದುರು ಕ್ಷಮೆ ಯಾಚನೆ ಮಾಡಿದ್ದಾರೆ. ನನ್ನ ಹೇಳಿಕೆಯಿಂದ ಕಲಾವಿದರಿಗೆ ನೋವಾದಲ್ಲಿ ಕ್ಷಮೆ ಯಾಚನೆ ಮಾಡುತ್ತೇನೆ ಎಂದಿದ್ದಾರೆ.




