ಒಡಿಶಾ: ಆಗ ತಾನೆ ವಿವಾಹವಾಗಿ ವರನ ಮನೆಗೆ ಬರುತ್ತಿದ್ದ ವಧುವನ್ನು ಮಾಜಿ ಪ್ರಿಯಕರನೊಬ್ಬ ಬಂದೂಕು ತೋರಿಸಿ ಅಪಹರಣ ಮಾಡಿದ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ರವಿವಾರ (ಫೆ.22) ನಡೆದಿದೆ.

ಬೋಲಂಗಿರ್ ಜಿಲ್ಲೆಯ ನಿವಾಸಿ ಹರಿಬಂಧು ಪಟೇಲ್ ಎಂದು ಗುರುತಿಸಲಾದ ವರನು ಮದುವೆಗಾಗಿ ಕಾಂತಮಲ್ಗೆ ಪ್ರಯಾಣ ಬೆಳೆಸಿದ್ದನು. ಮದುವೆಯ ವಿಧಿವಿಧಾನಗಳು ಮುಗಿದ ನಂತರ, ವಧು-ವರರು ಕುಟುಂಬ ಸದಸ್ಯರೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ, ತರ್ಭಾ ರಸ್ತೆಯ ಬಡಬಂಧ ಬಳಿ ಅವರ ವಾಹನವನ್ನು ಮಧ್ಯದಲ್ಲಿ ಅಡ್ಡಗಟ್ಟಲಾಗಿದೆ.
ಇಬ್ಬರು ಸಹಚರರೊಂದಿಗೆ ಬಂದ ಆರೋಪಿಯು ವರನಿಗೆ ಬಂದೂಕು ತೋರಿಸಿ ಹೆದರಿಸಿದ್ದಾನೆ. ಬಳಿಕ ಬಲವಂತವಾಗಿ ವಧವನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ವರ ಮತ್ತು ಆತನ ಕುಟುಂಬಿಕರು ಅಸಹಾಯಕರಾಗಿ ಘಟನೆಯನ್ನು ನೋಡುತ್ತಾ ನಿಂತಿದ್ದರು.
ಘಟನೆ ಬಳಿಕ ವರ ಹರಿಬಂಧು ಪಟೇಲ್ ತರ್ಭಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ತನ್ನ ಹೆಂಡತಿಯನ್ನು ಅಪಹರಿಸಿದಾಗ ತನ್ನನ್ನು ಗನ್ ಪಾಯಿಂಟ್ ನಲ್ಲಿ ಇರಿಸಲಾಗಿತ್ತು ಎಂದು ಹೇಳಿಕೊಂಡಿದ್ದಾನೆ.
ತರ್ಭಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್-ಇನ್-ಚಾರ್ಜ್ (ಐಐಸಿ) ಅನಿತಾ ಕಿಡೋ ಮಾತನಾಡಿ, ಹರಿಬಂಧು ಪಟೇಲ್ ತಮ್ಮ ಮದುವೆಗಾಗಿ ಕಾಂತಮಲ್ಗೆ ಪ್ರಯಾಣಿಸಿದ್ದರು. ಸಮಾರಂಭದ ನಂತರ, ದಂಪತಿಗಳು ಹಿಂತಿರುಗುತ್ತಿದ್ದಾಗ, ತರ್ಭಾ ರಸ್ತೆಯ ಬಡಬಂಧ ಬಳಿ ಮೂವರು ವ್ಯಕ್ತಿಗಳು ಅವರ ವಾಹನವನ್ನು ಅಡ್ಡಗಟ್ಟಿ, ಬಂದೂಕು ತೋರಿಸಿ ಬೆದರಿಸಿ ವಧುವನ್ನು ಅಪಹರಿಸಿದ್ದಾರೆ” ಎಂದು ಅವರು ಹೇಳಿದರು.




