ಬೈಂದೂರು: ವಿಶೇಷ ಚೇತನ ಮಗುವನ್ನು ಎತ್ತಿಕೊಂಡು ಹೊಳೆ ದಾಟಿದ ತಂದೆ; ವಿಡಿಯೋ‌ ವೈರಲ್

Share with

ಶಾಶ್ವತ ವ್ಯವಸ್ಥೆ ರೂಪಿಸಲು ಯೋಜನೆ ಸಿದ್ಧಪಡಿಸಲಾಗುವುದು: ಶಾಸಕ ಗಂಟಿಹೊಳೆ

ಉಡುಪಿ: ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಳಜಿತ್ ಗ್ರಾಮದ ಹುಲ್ಕಡ್ಕಿ ಗುಡಿಕೇರಿ ಎಂಬಲ್ಲಿ ಸೇತುವೆ ಇಲ್ಲದ ಕಾರಣ ಶಾಲೆಗೆ ಹೋಗುವ ಮಕ್ಕಳನ್ನು ಪೋಷಕರೇ ಎತ್ತಿಕೊಂಡು ಹೊಳೆ ದಾಟಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೇ ರೀತಿ ತಂದೆಯೊಬ್ಬರು ತನ್ನ ವಿಶೇಷ ಚೇತನ ಮಗುವನ್ನು ಹೆಗಲ ಮೇಲೆ ಕೂರಿಸಿ ಹೊಳೆ ದಾಟುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಬೈಂದೂರು ತಾಲೂಕಿನಲ್ಲಿ ಜನರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿನ ಜನ ಮಳೆಗಾಲದಲ್ಲಿ ಅನುಭವಿಸುವ ಪಾಡು ಹೇಳ ತೀರದ್ದು, ಅದರಲ್ಲೂ ಮಕ್ಕಳು ಅಪಾಯಕಾರಿ ಕಾಲು ಸಂಕ ಅಥವಾ ಹೊಳೆ ದಾಟಿ ಶಾಲೆಗೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ.
ಗುಡಿಕೇರಿಯಲ್ಲಿ ವಾಸಿಸುತ್ತಿರುವ ಕುಟುಂಬವೊಂದರ ಇಬ್ಬರು ವಿಶೇಷ ಚೇತನ ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ಹೋಗಲು ಮಾರ್ಗ ಮಧ್ಯೆ ಇರುವ ಹೊಳೆಯಿಂದ ಸಮಸ್ಯೆ ಎದುರಾಗುತ್ತಿದೆ. ಹಾಗೆ ತಂದೆ ತನ್ನ ಮಗನನ್ನು ಎತ್ತಿಕೊಂಡು ಆ ಹೊಳೆಯನ್ನು ದಾಟುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇಲ್ಲಿ ಸಂಕ ಇಲ್ಲದ ಕಾರಣ ನೀರು ಹರಿಯುವ ತೋಡನ್ನು ದಾಟಿಸಲು ಮಕ್ಕಳ ಪೋಷಕರೇ ಬರಬೇಕು. ಜೋರು ಮಳೆ ಬಂದರೆ ಪೋಷಕರಿಲ್ಲದೇ ಮಕ್ಕಳು ಶಾಲೆಗೆ ಹೋಗಲು ಬಹಳ ಕಷ್ಟ ಪಡಬೇಕಾಗುತ್ತದೆ. ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.

ಶಾಸಕರ ಭೇಟಿ, ಪರಿಶೀಲನೆ:
ಈ ವಿಡಿಯೋ ದೃಶವನ್ನು ಕಂಡ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸ್ಥಳಕ್ಕೆ ಧಾವಿಸಿ, ಮಕ್ಕಳನ್ನು, ಅವರ ಪಾಲಕ ಪೋಷಕರನ್ನು ಭೇಟಿ ಮಾಡಿ ತುರ್ತು ಅಗತ್ಯಗಳಿಗೆ ಸ್ಪಂದಿಸಿ, ತಾತ್ಕಾಲಿಕ ವ್ಯವಸ್ಥೆ ರೂಪಿಸಿದರು.
ಸರಿಯಾದ ಕಾಲು ಸಂಕ ವ್ಯವಸ್ಥೆ ಇಲ್ಲದೆ ಕ್ಷೇತ್ರದ ಕೆಲವು ಭಾಗದಲ್ಲಿ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ತುರ್ತಾಗಿ ಅಲ್ಲೆಲ್ಲ ಏನು ಮಾಡಬೇಕು ಎಂಬುದನ್ನು ಕಾರ್ಯಕರ್ತರಿಗೆ ನಿರ್ದೇಶನಗಳನ್ನು ನೀಡಲಾಗಿದೆ. ತಾತ್ಕಾಲಿಕ ನೆಲೆಯಲ್ಲೇ ಏನೆಲ್ಲ ಪರಿಹಾರ ಕಾರ್ಯ ಸೂಚಿಸಲು ಸಾಧ್ಯವೋ ಅದನ್ನು ತುರ್ತಾಗಿ ಮಾಡುತ್ತಿದ್ದೇವೆ. ಶಾಶ್ವತ ವ್ಯವಸ್ಥೆಯನ್ನು ರೂಪಿಸಲು ಯೋಜನೆ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದರು.


Share with

Leave a Reply

Your email address will not be published. Required fields are marked *