ಕಾಸರಗೋಡು: ಮಂಜೇಶ್ವರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಯೆನ್ನಲಾದ ಉಪ್ಪಳ ಸಮೀಪದ ಸೋಂಕಾಲ್ ಕೊಡಂಗೆ ರಸ್ತೆ ನಿವಾಸಿ ಎ.ಅಶೋಕ ಎಂಬಾತನನ್ನು ಬಂಧಿಸಿದ್ದಾರೆ. ಈತ ಮನೆಯ ಮಂಚದಡಿ ದಾಸ್ತಾನಿರಿಸಿದ್ದ 33.05 ಕಿ.ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ ಎಸ್ಐ ಕೆ.ಆರ್.ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಗಳಲ್ಲಿ ಈತ ಒಬ್ಬನೆಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯ್ಭಾರತ್ ರೆಡ್ಡಿ ನಿರ್ದೇಶನ ಹಾಗೂ ಡಿವೈಎಸ್ಪಿ ಸಿ.ಕೆ.ಸುನೀಲ್ ಕುಮಾರ್ ಮೇಲ್ನೋಟದಲ್ಲಿ ತನಿಖೆ ನಡೆಯುತ್ತಿದೆ. ಬಂಧಿತ ಅಶೋಕ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.