ಸುರತ್ಕಲ್: ಮುಕ್ಕದ ಮನೆಯೊಂದಕ್ಕೆ ಮಂಗಳವಾರ (ಡಿ.2) ಕಳ್ಳರು ನುಗ್ಗಿ ಮನೆಯಲ್ಲಿದ್ದ ಒಂಟಿ ವೃದ್ಧ ಮಹಿಳೆಯನ್ನು ಬೆದರಿಸಿ 4 ಲಕ್ಷ ರೂ.ನ 40 ಗ್ರಾಂ. ಚಿನ್ನಾಭರಣ, 14 ಸಾವಿರ ರೂ. ನಗದನ್ನು ಲೂಟಿ ಮಾಡಿದ್ದಾರೆ.

ಮುಕ್ಕದ ಸಸಿಹಿತ್ತು ರಸ್ತೆಯಲ್ಲಿರುವ ಮಿತ್ರ ಪಟ್ಟದ ಜಯಲಕ್ಷ್ಮಿ ನಿವಾಸ ಎಂಬ ಮನೆಯಲ್ಲಿ ಈ ಕೃತ್ಯ ನಡೆದಿದೆ.
ಡಿ.2 ರ ಮಂಗಳವಾರ ಮನೆಯಲ್ಲಿ ದಿ.ಚಿನ್ನಪ್ಪ ಸುವರ್ಣ ಅವರ ಪತ್ನಿ ಜಲಜ (85) ಒಬ್ಬರೇ ಇದ್ದು ಮಧ್ಯಾಹ್ನ 2.30ರ ವೇಳೆಗೆ ಮನೆಗೆ ಬಂದ ಅಪರಿಚಿತ ಯುವಕರಿಬ್ಬರು ಕುಡಿಯಲು ನೀರು ಕೇಳಿದ್ದು, ನೀರು ಅಲ್ಲಿಯೇ ಹೊರಗೆ ಇದೆ ಎಂದು ಮಹಿಳೆ ಹೇಳಿದರೂ ಅಕ್ರಮವಾಗಿ ಒಳ ಪ್ರವೇಶಿಸಿದ್ದ ಯುವಕರು ಚಿನ್ನಾಭರಣ ಎಲ್ಲಿದೆ ಹೇಳಿ ಎಂದು ಮಹಿಳೆಯನ್ನು ತುಳುವಿನಲ್ಲಿ ಪ್ರಶ್ನಿಸಿದ್ದರು.
ಚಿನ್ನಾಭರಣ ಇಲ್ಲ ಎಂದು ವೃದ್ಧೆ ಹೇಳಿದಾಗ ಯುವಕರು ಬೆದರಿಸಿ ಬಳಿಕ ಕಬ್ಬಿಣದ ಕಪಾಟಿನಲ್ಲಿ ಪ್ಲಾಸ್ಟಿಕ್ ಟಿನ್ನಲ್ಲಿದ್ದ 16 ಗ್ರಾಂ.ನ ಚಿನ್ನದ ಸರ, 20 ಗ್ರಾಂನ 2 ಬಳೆ, 14 ಸಾವಿರ ರೂ. ನಗದು ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಸುರತ್ಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.




