ಬೆಳ್ತಂಗಡಿ: ಸುರಿದ ಭಾರೀ ಗಾಳಿ ಮಳೆಗೆ ಚಾರ್ಮಾಡಿ ಘಾಟಿ ಪ್ರದೇಶದ 10ನೇ ತಿರುವು ಸಹಿತ ಎರಡು–ಮೂರು ಸ್ಥಳಗಳಲ್ಲಿ ರಸ್ತೆಗೆ ಮರ, ಮಣ್ಣು ಇತ್ಯಾದಿಗಳು ಬಿದ್ದಿದ್ದವು. ಇದೀಗ ಅವುಗಳನ್ನೆಲ್ಲಾ ತೆರವುಗೊಳಿಸಲಾಗಿದ್ದು, ವಾಹನ ಸಂಚಾರ ಪುನರಾರಂಭಗೊಂಡಿದೆ.
ಘಾಟಿ ರಸ್ತೆಯಲ್ಲಿ ಮಣ್ಣು ಕುಸಿದ ಕಾರಣ ಶುಕ್ರವಾರ ರಾತ್ರಿ ಮುಂಜಾಗ್ರತಾ ಕ್ರಮವಾಗಿ ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಬಂಧವನ್ನು ಹೇರಲಾಗಿತ್ತು. ಶನಿವಾರ ಬೆಳಿಗ್ಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಂಗಳೂರು ವಿಭಾಗಕ್ಕೆ ಸೇರಿದ 7, 9, 10 ಮತ್ತು 11ನೇ ತಿರುವು ಪ್ರದೇಶದಲ್ಲಿ ರಸ್ತೆಗೆ ಬಿದ್ದಿದ್ದ ಮರ, ಮಣ್ಣು ಮುಂತಾದವುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.