ಚಿಕ್ಕಬಳ್ಳಾಪುರ, ಡಿಸೆಂಬರ್ 17: ಅವನು 14 ವರ್ಷದ ಅಪ್ರಾಪ್ತ ಬಾಲಕನಿರುವಾಗಿನಿಂದ ಮನೆಗಳ್ಳತನಕ್ಕೆ ಇಳಿದಿದ್ದ. ಇದೀಗ ಆತನಿಗೆ 38 ವರ್ಷ. ಮನೆಗಳ್ಳತನ (theft) ಮಾಡಿ ಜೈಲಿಗೆ ಹೋಗುವುದು ಆತನ ಕಾಯಕವಾಗಿದೆ. ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ 96 ಮನೆಗಳ್ಳತನ ಮಾಡಿ ಜೈಲಿಗೆ ಹೋಗಿದ್ದ. ಆದರೆ ಜಾಮೀನಿನ ಮೇಲೆ ಆಚೆ ಬಂದಿದ್ದೆ ತಡ, ಮತ್ತೆ ತನ್ನ ಕಾಯಕಕ್ಕೆ ಇಳಿದಿದ್ದ. 97ನೇ ಮನೆ ಕಳ್ಳತನ ಮಾಡಿ ಇದೀಗ ಆಸಾಮಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.
ಕುಖ್ಯಾತ ಕಳ್ಳನ ಹೆಸರು ರಾಹುಲ್ ಕುಮಾರ್ ಶರ್ಮಾ ಅಲಿಯಾಸ್ ಭರತ್ ಕುಮಾರ್. ಇತ ಮೂಲತಃ ತೆಲಂಗಾಣದ ಹೈದರಾಬಾದ್ ನಿವಾಸಿ. ರಾಹುಲ್ ತಾನು 14 ವರ್ಷದಲ್ಲೇ ಮನೆ ಕಳ್ಳತನ ಮಾಡಿ ಜೈಲು ಪಾಲಾಗಿದ್ದ. ಬುದ್ಧಿ ಕಲಿಯದೆ ಮನೆ ಕಳ್ಳತನ ಮಾಡುವುದು ಮೋಜಿ, ಮಸ್ತಿ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ.
ಇದೀಗ ಈತನ ವಯಸ್ಸು 38 ವರ್ಷ. ಆದರೂ ಬುದ್ಧಿ ಕಲಿತಂತ್ತಿಲ್ಲ. ತೆಲಂಗಾಣ, ಆಂಧ್ರದಲ್ಲಿ ಬರೋಬ್ಬರಿ 96 ಮನೆಗಳ್ಳತನ ಮಾಡಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಈಗ 97ನೇ ಬಾರಿಗೆ ಚಿಕ್ಕಬಳ್ಳಾಪುರದ ಬಳಿ ಅಣಕನೂರು ಗ್ರಾಮದಲ್ಲಿ ಮನೆಗಳ್ಳತನ ಮಾಡಿ ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಯಾಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಸಂತೋಷ್ ನಗರಕ್ಕೆ ಅಲ್ಲಾ ಭಕಾಶ್ ಎನ್ನುವ ಸ್ನೇಹಿತನನ್ನು ನೋಡಲು ಚಿಕ್ಕಬಳ್ಳಾಪುರಕ್ಕೆ ರಾಹುಲ್ ಆಗಮಿಸಿದ್ದ. ವಾಪಸ್ ಮರಳುವಾಗ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರಿನಲ್ಲಿ ನಾಗರಾಜ್ ಎ.ಎಂ ಎನ್ನುವವರ ಮನೆಗೆ ಕನ್ನ ಹಾಕಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ. ನವೆಂಬರ್ 27ರಂದು ಘಟನೆ ನಡೆದಿತ್ತು.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲಿಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದು, ರಾಹುಲ್ ಕಳ್ಳತನ ಮಾಡಿದ್ದು ಗೊತ್ತಾಗಿದೆ. ರಾಹುಲ್ಗೆ ಆತನ ಸ್ನೇಹಿತ ಅಲ್ಲಾ ಭಕಾಶ್ ಹಾಗೂ ಆಂಧ್ರದ ಸೈಯದ್ ದಾವೂದ್ ಸಾಥ್ ನೀಡಿದ್ದು ಗೊತ್ತಾಗಿದೆ. ಇದರಿಂದ ಪೊಲೀಸರು ಮೂವರನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ, ಅಪ್ರಾಪ್ತ ಬಾಲಕನಿರುವಾಗಲೇ ಕಳ್ಳತನ ಮಾಡಿದ್ದ ರಾಹುಲ್ ಎಂಬ ಬಾಲಕ, ಇದೀಗ ಕುಖ್ಯಾತ ಮನೆಗಳ್ಳನಾಗಿದ್ದು ವಿಪರ್ಯಾಸವೇ ಸರಿ.





