ಕಾಸರಗೋಡು: ಸ್ವಾತಂತ್ರ್ಯ ಪೂರ್ವದ 1937ರಲ್ಲೇ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಿಂದ ಪದವೀಧರನಾಗಿ, ಬ್ರಿಟೀಷ್ ಆಡಳಿತಕಾಲದಲ್ಲೇ ಕಾಸರಗೋಡಿನ ಪ್ರಪ್ರಥಪಮ ಮೆಜಿಸ್ಟ್ರೇಟರಾಗಿ, ಅವಿಭಜಿತ ದ. ಕ ಜಿಲ್ಲೆಯ ಕಾಸರಗೋಡಿನ ಮೊದಲ ಚುನಾಯಿತ ಶಾಸಕರಾಗಿದ್ದ, ನೆಹರೂ ಆಪ್ತ, ಕಾಂಗ್ರೆಸ್ ಧುರೀಣ ದಿ. ಎಂ. ಎಸ್. ಮೊಗ್ರಾಲ್ ಅವರ 30ನೇ ಪುಣ್ಯತಿಥಿಯ ಸಂಸ್ಮರಣೆ ನಡೆಯಿತು.

ಮೊಗ್ರಾಲಿನ ದಿ. ಎಂ. ಎಸ್. ಮೊಗ್ರಾಲ್ ಸ್ಮಾರಕ ಗ್ರಂಥಾಲಯದಲ್ಲಿ ಲೈಬ್ರರಿ ಸಮಿತಿ ವತಿಯಿಂದ ನಡೆದ ಸಂಸ್ಮರಣಾ ಸಮಾರಂಭವನ್ನು ಪತ್ರಕರ್ತ, ಲೇಖಕ ಎಂ. ನಾ. ಚಂಬಲ್ತಿಮಾರ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು “ನಾಡಿಗೆ ಮಹನೀಯ ಕೊಡುಗೆ ಇತ್ತ ನಿನ್ನೆಗಳ ಸಾಧಕರನ್ನು ಇಂದಿನವರು ಮರೆಯುತ್ತಾರೆಂದರೆ ನಾವು ಇತಿಹಾಸವನ್ನು ಅವಗಣಿಸಿ ನಿರ್ಲಕ್ಷಿಸುತ್ತೇವೆಂದೇ ಅರ್ಥ. ಹೊಸ ಪೀಳಿಗೆ ಮತ, ಮಾದಕ ಅಮಲುಗಳ ದಾಸರಾಗದೇ ಮೌಲ್ಯ, ಆದರ್ಶ, ಸಂಸ್ಕೃತಿಗಳ ದಾಸರಾಗಿ ನಮ್ಮ ನಾಡಿನ ನಿನ್ನೆಗಳ ಗತ ವೈಭವ ಕೈದಾಟಿಸಬೇಕು. ಅದಲ್ಲದಿದ್ದರೆ ನಾಳೆ ನಮ್ಮ ನೆಲದ ಚರಿತ್ರೆಗಳೇ ಬದಲಾಗಲಿದೆ. ದಿ ಎಂ.ಎಸ್ ಮೊಗ್ರಾಲ್ ಅಂಥವರ ಕೊಡುಗೆ ಸ್ಮರಣೀಯವಾಗಿ, ಪ್ರಚೋದಕವಾಗಿ ಜನಾಂಗದಿಂದ ಜನಾಂಗಕ್ಕೆ ಕೈದಾಟಬೇಕು” ಎಂದರು.
ಸಮಾರಂಭದಲ್ಲಿ ದಿ. ಎಂ. ಎಸ್ ಮೊಗ್ರಾಲ್ ಅವರ ಮೊಮ್ಮಗ ಸಿದ್ದೀಖಾಲಿ ಮೊಗ್ರಾಲ್ ಅಧ್ಯಕ್ಷತೆ ವಹಿಸಿದರು. ಚಿರಂಜೀವಿ (ರಿ) ಕುಂಬಳೆ ಇದರ ಅಧ್ಯಕ್ಷ ಕೃಷ್ಣ ಗಟ್ಟಿ, ಅಬ್ದು ಕಾವುಗೋಳಿ, ಬಷೀರ್ ಅಹ್ಮದ್ ಸಿದ್ದೀಖ್, ಮಾಹಿನ್ ಮಾಸ್ತರ್, ಕೆ. ಸಿ. ಮೋಹನ್ ಕಿಂಗ್ ಸ್ಟಾರ್, ಸಲಾಂ ಚೌಕಿ, ವಿಜಯನ್ ಮೊಗ್ರಾಲ್ ನಾಂಗಿ, ಗೋಪಿ ಎಂ. ಕುಂಬಳೆ, ನವೀನ್, ವಿಶ್ವನಾಥ ಭಂಡಾರಿ, ಮಹೇಶ್ವರನ್ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಸಿದ್ದೀಖ್ ರಹ್ಮಾನ್ ಸ್ವಾಗತಿಸಿದರು. ವಿಜಯನ್ ವಂದಿಸಿದರು.




