ಆಲಪ್ಪುಳ: ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡುತ್ತಿದ್ದಾಗ ಅದರಿಂದ ಕಳವು ನಡೆಸಲೆತ್ನಿಸಿದ ದೇವಸ್ವಂ ಮಂಡಳಿಯ ನೌಕರ, ಕಾಂಗ್ರೆಸ್ ಪ್ರಾದೇಶಿಕ ನೇತಾರ ಹರಿಪ್ಪಾಡ್ ಕುಮಾರಪುರಂ ನಿವಾಸಿ ರಾಗೇಶ್ಕೃಷ್ಣ ಎಂಬಾತನನ್ನು ದೇವಸ್ವಂ ವಿಜಿಲೆನ್ಸ್ ಸೆರೆಹಿಡಿದಿರುವ ಘಟನೆ ಹರಿಪ್ಪಾಡ್ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆದಿದೆ.

ಕಾಣಿಕೆ ಹುಂಡಿಯ 35 ಸಾವಿರ ರೂಪಾಯಿಗಳನ್ನು ಈತ ಕಳವುಗೈಯಲು ಯತ್ನಿಸಿರುವುದಾಗಿ ದೂರಲಾಗಿದೆ. ಹಣ ಎಣಿಕೆ ಮಾಡುತ್ತಿದ್ದಂತೆ ಮೊತ್ತವನ್ನು ಬ್ಯಾಗ್ಗೆ ತುಂಬಿಸಿಕೊಂಡಿದ್ದಾರೆ ಎನ್ನಲಾಗಿದೆ. 20ರಷ್ಟು ನೌಕರರು ಎಣಿಕೆ ಮಾಡಿದ ಹಣವನ್ನು ಬ್ಯಾಂಕ್ ನೌಕರರಿಗೆ ಹಸ್ತಾಂತರಿಸಲು ಕೊಂಡೊಯ್ಯುತ್ತಿದ್ದಂತೆ ರಾಗೇಶ್ ಸಂಶಯಾಸ್ಪದವಾಗಿ ವರ್ತಿಸಿದ್ದು, ಇದನ್ನು ಗಮನಿಸಿದ ವಿಜಿಲೆನ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಇದರಿಂದ ರಾಗೇಶ್ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಯೂತ್ ಕಾಂಗ್ರೆಸ್ ಕುಮಾರಪುರಂ ಮ೦ಡಲ ಮಾಜಿ ಅಧ್ಯಕ್ಷನಾಗಿದ್ದ ರಾಗೇಶ್ಕೃಷ್ಣ 2021ರಲ್ಲಿ ಕುಮಾರಪುರಂ ಪಂಚಾಯತ್ನಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.




