ಹೊಸದಿಲ್ಲಿ: ಸಂತ್ತಿನ ಚಳಿಗಾಲದ ಅಧಿವೇಶನದ ಆರಂಭಿಕ ದಿನವಾದ ಸೋಮವಾರ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಸಾಕು ನಾಯಿಯೊಂದಿಗೆ ಸದನಕ್ಕೆ ಆಗಮಿಸಿದರು. ಈ ಅಪರೂಪದ ಮತ್ತು ಅಸಾಮಾನ್ಯ ದೃಶ್ಯ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ತಮ್ಮ ಸಾಕು ನಾಯಿ ಜೊತೆ ಸದನಕ್ಕೆ ಆಗಮಿಸಿದ್ದಾರೆ. ಭದ್ರತಾ ಸಿಬ್ಬಂದಿ ಸಾಕು ನಾಯಿಯೊಂದಿಗೆ ಕಾರಿನೊಳಗೆ ಕುಳಿತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಸದೆ ರೇಣುಕಾ ಚೌಧರಿ, ‘ನಾಯಿಯ ಬಗ್ಗೆ ಇತರ ಸದಸ್ಯರಿಗೆ ಇರುವ ಆತಂಕ, ಕಳವಳಗಳನ್ನು ತಳ್ಳಿಹಾಕಿದರು, ನಾಯಿ ನಿರುಪದ್ರವಿ ಮತ್ತು ಚಿಕ್ಕದಾಗಿದೆ. ಸರಕಾರ ಸದನದ ಒಳಗೆ ಪ್ರಾಣಿಗಳು ಬರುವುದನ್ನು ಇಷ್ಟಪಡದಿರಬಹುದು. ಆದರೆ ಸಮಸ್ಯೆ ಏನು? ಅದು ತುಂಬಾ ಚಿಕ್ಕ ಜೀವಿ. ಅದು ಯಾರನ್ನೂ ಕಚ್ಚುವುದಿಲ್ಲ. ಸಂಸತ್ತಿನೊಳಗೆ ಇದು ಏಕೆ ಸಮಸ್ಯೆಯಾಗಬೇಕು? ಕಚ್ಚುವವರು ಸಂಸತ್ತಿನೊಳಗೆ ಇದ್ದಾರೆ’ ಎಂದು ಹೇಳಿದರು.
ಬಿಜೆಪಿ ಈ ಕೃತ್ಯವನ್ನು ಖಂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಜಗದಾಂಬಿಕಾ ಪಾಲ್, ಚೌಧರಿ ಅವರ ಕ್ರಮವು ಸಂಸದರಿಗೆ ನೀಡಲಾದ ಸವಲತ್ತುಗಳ ದುರುಪಯೋಗವಾಗಿದೆ. ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷ ಸವಲತ್ತುಗಳು ಯಾರಿಗೂ ನಿಯಮಗಳನ್ನು ಉಲ್ಲಂಘಿಸಲು ಅಥವಾ ಸಾಕುಪ್ರಾಣಿಗಳನ್ನು ಸದನಕ್ಕೆ ತರಲು ಅವಕಾಶ ನೀಡುವುದಿಲ್ಲ. ಹೊಣೆಗಾರಿಕೆ ಎಂಬುದು ಇರಬೇಕು ಎಂದು ಹೇಳಿದ್ದಾರೆ.




