ಬೆಳಗಾವಿ, ಜನವರಿ 27: ಕರ್ನಾಟಕ–ಗೋವಾ ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ (Rs 400 Crore Robbery Case) ಮತ್ತೊಂದು ತಿರುವು ಪಡೆದಿದೆ. ಹಣ ಸಾಗಿಸಿದ್ದ ಎರಡು ಕಂಟೇನರ್ ವಾಹನಗಳ ಚಾಲಕರನ್ನು ಎಸ್ಐಟಿ ತಂಡ ಬಂಧಿಸಿದ್ದು, ಅಜ್ಞಾತ ಸ್ಥಳದಲ್ಲಿ ಅವರಿಬ್ಬರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇಂದು ಸಂಜೆ ಬಂಧನದ ಅಧಿಕೃತ ಘೋಷಣೆ?
ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್ಗಳನ್ನು ಹೈಜಾಕ್ ಮಾಡಲಾಗಿತ್ತು. ಹಣ ಸಾಗಿಸುತ್ತಿದ್ದ 2 ಕಂಟೇನರ್ಗಳನ್ನು ಬೆಳಗಾವಿ-ಗೋವಾ ಗಡಿ ಚೋರ್ಲಾ ಘಾಟ್ದಿಂದ ನಾಪತ್ತೆ ಆಗಿತ್ತು. ಇದೀಗ ಅದೇ ಕಂಟೇನರ್ ಚಾಲಕರಿಬ್ಬರನ್ನು ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳ ತಂಡ ಬಂಧಿಸಿದೆ ಎಂದು ನಾಸಿಕ್ ಪೊಲೀಸರಿಂದ ಮಾಹಿತಿ ದೊರಕಿದೆ.ಚಾಲಕರ ಬಂಧನದ ಬಳಿಕ ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಯಿದ್ದು, ಇಂದು ಸಂಜೆ ವರೆಗೆ ಇಬ್ಬರ ಬಂಧನದ ಅಧಿಕೃತ ಘೋಷಣೆಯ ನಿರೀಕ್ಷಣೆಯಿದೆ.
ನಡೆದಿದ್ದೇನು?
2 ಸಾವಿರ ರೂ. ಮುಖಬೆಲೆಯ ನೂರಾರು ಕೋಟಿ ದರೋಡೆ ಪ್ರಕರಣವನ್ನು ಮಹಾರಾಷ್ಟ್ರದ ಸಂದೀಪ್ ಪಾಟೀಲ್ ಎಂಬಾತ ಬಯಲು ಮಾಡಿದ್ದ. ಹಣ ಕಿಶೋರ್ ಸೇಠ್ ಎನ್ನುವವರಿಗೆ ಸೇರಿದ್ದು, ಇದರಲ್ಲಿ ವಿರಾಟ್ ಗಾಂಧಿ ಎನ್ನುವರ ಕೈವಾಡವೂ ಇದೆ ಎಂದಿದ್ದ.ಅಕ್ಟೋಬರ್ 22ರಂದು ಸಂದೀಪ್ನನ್ನು ಉದ್ಯಮಿ ಕಿಶೋರ್ ಸೇಠ್ ಮತ್ತವನ ಕಡೆಯವರು ಅಪಹರಿಸಿದ್ದರು. ಹೀಗೆ ಹೊತ್ತೊಯ್ದವನಿಗೆ ಚಿತ್ರಹಿಂಸೆ ಕೊಟ್ಟು ದರೋಡೆ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ದರೋಡೆಯಲ್ಲಿ ನೀನೂ ಶಾಮೀಲಾಗಿದ್ದೀಯಾ, ಹಣ ಎಲ್ಲಿದೆ ಎಂದು ಕೇಳಿದ್ದರು.
ಈ ನಡುವೆ ಉದ್ಯಮಿ ಕಿಶೋರ್ ಹಾಗೂ ಮತ್ತಿವನ ಸ್ನೇಹಿತ ಜಯೇಶ್ ನಡುವಿನ ಸಂಭಾಷಣೆಯೊಂದು ವೈರಲ್ ಆಗಿತ್ತು. ಅದರ ಪ್ರಕರಾರ ಹಣ ಗುಜರಾತಿನ ರಾಜಕಾರಣಿಯೊಬ್ಬರಿಗೆ ಸೇರಿದ್ದೆಂಬ ಸ್ಫೋಟಕ ಮಾಹಿತಿ ತಿಳಿದು ಬಂದಿತ್ತು. ಈ ಬೆನ್ನಲ್ಲೇ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಹಣ ಸಾಗಿಸಲು ಬಳಸಿದ ಕಂಟೇನರ್ ಚಾಲಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ.





