ರಾಯರ ಅನುಗ್ರಹ ಇದ್ದರೆ ಯಾವುದನ್ನೂ ಸಾಧಿಸಬಹುದು – ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು

Share with

ಮಂಜೇಶ್ವರ: ‘ಶಿಷ್ಯರ ಮನಸ್ಸನ್ನು ಅರಿತು ಶಿಷ್ಯರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾ ಗುರುಗಳು ಹಾಗೂ ತತ್ವಜ್ಞಾನಿಗಳು ರಾಘವೇಂದ್ರ ಸ್ವಾಮಿಗಳು. ಭಕ್ತರ ಮನಸ್ಸನ್ನು ಅರಿತು, ಬೇಡಿಕೆಯನ್ನು ಈಡೇರಿಸುವವರು. ರಾಘವೇಂದ್ರ ಸ್ವಾಮಿಗಳ ಅನುಗ್ರಹ ಇದ್ದರೆ ಯಾವುದನ್ನೂ ಸಾಧಿಸಬಹುದು. ಕಷ್ಟಗಳನ್ನು ದೂರ ಮಾಡುವ ‘ಕಾರುಣ್ಯ ವಾರುಧಿ’ ರಾಘವೇಂದ್ರ ಸ್ವಾಮಿಗಳು ಎಂದು ಧಾರ್ಮಿಕ ಸಾಮಾಜಿಕ ಮುಂದಾಳು, ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ನುಡಿದರು.

ಮಂಜೇಶ್ವರ ಹೊಸಬೆಟ್ಟು ಜಮ್ಮದ ಮನೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ರಾಯರ ಭಕ್ತರು ಮಂಜೇಶ್ವರ ವತಿಯಿಂದ ಆ.11ರಂದು ನಡೆದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 354 ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದಲ್ಲಿ ಹಲವಾರು ಧಾರ್ಮಿಕ, ಶ್ರಾದ್ಧ ಕೇಂದ್ರಗಳಿದ್ದು, ಇಲ್ಲಿ ನಡೆಯುವ ದೈವ ದೇವರ ಆರಾಧನೆ ಹಿಂದೂ ಧರ್ಮದ ಭದ್ರ ಬುನಾದಿಗೆ ಮುನ್ನುಡಿಯಾಗಿದೆ. ಅದೇ ರೀತಿ ಪ್ರಪ್ರಥಮ ಬಾರಿಗೆ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ಮಂಜೇಶ್ವರದಲ್ಲಿ ನಡೆಯುತ್ತಿರುವುದು ರಾಯರ ಅನುಗ್ರಹದಿಂದಾಗಿದೆ. ಮಂಜೇಶ್ವರದ ಸುಂದರ ಪರಿಸರದಲ್ಲಿ ರಾಯರ ಭಕ್ತರ ವತಿಯಿಂದ ರಾಘವೇಂದ್ರ ಸ್ವಾಮಿಗಳ ಆರಾಧನೆ ಇಂದು ನಡೆಯುವ ಮೂಲಕ ನಮ್ಮ ಧಾರ್ಮಿಕ ಆಚರಣೆಗಳಿಗೆ ಇನ್ನಷ್ಟು ಪ್ರಾಮುಖ್ಯತೆ ಬಂದಿದೆ, ಎಲ್ಲರಿಗೂ ರಾಯರ ದರ್ಶನ, ಅನುಗ್ರಹ ಪಡೆಯಲು ಸಾಧ್ಯವಾಗಿದೆ. ಧಾರ್ಮಿಕ ಆಚರಣೆಗಳಿಗೆ ಸಾಮಾಜಿಕ ಅಯಾಮಗಳು ಬರುತ್ತಿರುವುದು ನಮ್ಮಲ್ಲಿ ಒಗ್ಗಟ್ಟನ್ನು ಉಂಟು ಮಾಡಲು ಸಹಾಯಕವಾಗಿದೆ ಎಂದು ಅವರು ಹೇಳಿದರು.

ಈ ವೇಳೆ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಹೈಮೇಶ್ ಬಿ.ಎಮ್ ಕಟ್ಟೆ ಬಜಾರ್, ಜಮ್ಮದ ಮನೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ರಾಮಚಂದ್ರ ರಾವ್ ಕಡಂಬಾರ್, ಸಂಕಬೈಲ್ ಸತೀಶ್ ಅಡಪ, ಡಾ. ಮುರಳಿ ಮೋಹನ್ ಚೂಂತಾರ್, ಡಾ. ರಾಜಶ್ರೀಮುರಳಿ ಮೋಹನ್ ಚೂಂತಾರ್, ಕುಡಾಲ್ ಲಕ್ಷಣ ಆಚಾರ್ಯ, ಕುಡಾಲ್ ದಾಮೋದರ ಆಚಾರ್ಯ, ಕುಡಾಲ್ ಲಕ್ಷ್ಮೀ ನಾರಾಯಣ ಆಚಾರ್ಯ, ಎಚ್. ಕೇಶವ ಆಚಾರ್ಯ ಪುತ್ತೂರು, ರಾಮಕೃಷ್ಣ ಆಚಾರ್ಯ ಕುಂಜತ್ತೂರು, ಉದ್ಯಮಿ ಕಿರಣ್ ಬಿ.ಎಮ್ ಕಟ್ಟೆ ಬಜಾರ್, ಹರೀಶ್ ಆಚಾರ್ಯ ಕುಂಬಳೆ, ನವೀನ್ ಅಡಪ ಹೊಸಬೆಟ್ಟು, ಯೋಗೀಶ್ ಕುಚ್ಚಿಕ್ಕಾಡ್, ಕಿಶೋರ್ ಭಗವತೀ, ರಾಕೇಶ್ ಕುಲಾಲ್ ಕಡಂಬಾರ್, ಅಕ್ಷಯ್ ಶೆಟ್ಟಿ ಜಮ್ಮದಮನೆ, ಜಗದೀಶ್ ಆಚಾರ್ಯ ಐಲ, ಪುರುಷೋತ್ತಮ್ ಮುಟ್ಟಂ, ವಾಗೇಶ ಆಚಾರ್ಯ ರಾಮತ್ತಮಜಾಲ್, ದೀಪಕ್ ರಾಜ್ ಉಪ್ಪಳ, ಸಂತೋಷ್ ಸಜೀಪ, ಚಂದ್ರೆಶ್ ಮಾನ್ಯ, ಜೀವನ್ ಕಡಂಬಾರ್, ಪವನ್ ಆಚಾರ್ಯ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.

ರಾಯರ ಭಕ್ತರು ಮಂಜೇಶ್ವರ ಸಂಸ್ಥಾಪಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ರಾಜೇಶ್ ಕಡಂಬಾರು ವಂದಿಸಿದರು. ರಾಯರ ಆರಾಧನಾ ಮಹೋತ್ಸವದಂಗವಾಗಿ ಪ್ರಧಾನ ಋತ್ವಿಜರಾದ ಯಾದವ ಶರ್ಮಾ ಮಂಗಳೂರು ಹಾಗೂ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಪ್ರಧಾನ ಅರ್ಚಕರಾದ ತಿರುಮಲೇಶ ಆಚಾರ್ಯರ ಪೌರೋಹಿತ್ಯದಲ್ಲಿ ಸ್ಥಳ ಶುದ್ಧಿ, ಪ್ರಾರ್ಥನೆ, ಶ್ರೀ ಗುರು ರಾಯರ ವಿಶೇಷ ಪಾದಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರದ್ದೆ, ಭಕ್ತಿಯಿಂದ ಪಾಲ್ಗೊಂಡ ಭಕ್ತಾದಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಂತ್ರಾಕ್ಷತೆಯ ಪ್ರಸಾದವನ್ನು ಸೀಕರಿಸಿ ಕೃತಜ್ಞರಾದರು.


Share with

Leave a Reply

Your email address will not be published. Required fields are marked *