
ಉಡುಪಿ: ಮುಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರದ ತಾಕೊಡೆ ಮರ ಎ.3ರಂದು ಮದ್ಯಾಹ್ನ ಬುಡಸಹಿತ ಧರೆಗುರುಳಿದೆ. ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿದ್ದ ಮರ ಅಂತ್ಯ ಕಂಡಂತಾಗಿದೆ. ಸುಮಾರು 800 ರಿಂದ 1000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢವಾಗಿದೆ. ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿದ್ದ ಅವಳಿ ವೀರರಾದ ಕಾಂತಬಾರೆ-ಬೂದಬಾರೆಯರು. ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ಬಟ್ಟೆಯ ತೊಟ್ಟಿಲು ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ ಕೊಂಬೆ ಅನ್ನುವುದು ಉಲ್ಲೇಖನೀಯ. ಬೃಹದಾಕಾರದ ಈ ಮರದ ಪಡ್ದಾಯಿ ಗೆಲ್ಲು ಕೆಲ ವರ್ಷಗಳ ಹಿಂದೆ ಭಾರೀ ಗಾಳಿಮಳೆಯ ಸಂದರ್ಭ ಬಿದ್ದಿತ್ತು.





