ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಮೊಮ್ಮಗನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಮೊಮ್ಮಗ ದೇವೇಂದ್ರ ಗೆಹ್ಲೋಟ್ ವಿರುದ್ಧ ಪತ್ನಿ ದಿವ್ಯಾ ಗೆಹ್ಲೋಟ್ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಮಧ್ಯಪ್ರದೇಶದ ರತ್ಲಾಂ ಜಿಲ್ಲಾ ಎಸ್ಪಿ ಅಮಿತ್ ಕುಮಾರ್ಗೆ ಲಿಖಿತ ದೂರು ಸಲ್ಲಿಕೆ ಮಾಡಿದ್ದಾರೆ. ದೇವೇಂದ್ರ ಗೆಹ್ಲೋಟ್, ತಂದೆ ಜಿತೇಂದ್ರ ಗೆಹ್ಲೋಟ್, ಮೈದುನ ವಿಶಾಲ್ ಗೆಹ್ಲೋಟ್, ಅನಿತಾ ಗೆಹ್ಲೋಟ್ (ರಾಜ್ಯಪಾಲರ ಪತ್ನಿ) ವಿರುದ್ಧವೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಏನೆಲ್ಲ ಆರೋಪ..?
ಮದುವೆಗೂ ಮುನ್ನ ಪತಿ ದೇವೇಂದ್ರ ಗೆಹ್ಲೋಟ್ಗೆ ಅಲ್ಕೋಹಾಲ್, ಡ್ರಗ್ಸ್, ಆಕ್ರಮ ಸಂಬಂಧ ಇತ್ತು. ಇವುಗಳನ್ನು ಮುಚ್ಚಿಟ್ಟು ದೇವೇಂದ್ರ ಗೆಹ್ಲೋಟ್ ಜೊತೆಗೆ ನನ್ನ ಮದುವೆ ಮಾಡಿದ್ದಾರೆ. 2018ರ ಏಪ್ರಿಲ್ 18 ರಂದು ದಿವ್ಯಾ-ದೇವೇಂದ್ರ ಗೆಹ್ಲೋಟ್ ವಿವಾಹವಾಗಿದೆ. ಗಂಡನ ಮನೆಯಲ್ಲಿ ಊಟ ಕೊಟ್ಟಿಲ್ಲ, ಹೊಡೆದು ಹಿಂಸೆ ನೀಡಿದ್ದಾರೆ. 50 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ತವರು ಮನೆಯಿಂದ ಹಣ ತರದಿದ್ದರೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನಾಲ್ಕು ವರ್ಷದ ಮಗಳನ್ನು ನನ್ನಿಂದ ಕಿತ್ತುಕೊಂಡಿದ್ದು, ಆಕೆಯನ್ನು ಪತಿಯ ವಶದಲ್ಲಿ ಇರಿಸಿಕೊಂಡಿದೆ ಎಂದು ದೂರು ನೀಡಿದ್ದಾರೆ.
ಈ ಎಲ್ಲ ಘಟನೆ ಉಜ್ಜೈನಿ ಜಿಲ್ಲೆಯಲ್ಲಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗ ದೂರು ಉಜ್ಜೈನಿ ಜಿಲ್ಲೆಯ ಪೊಲೀಸರಿಗೆ ರತ್ಲಾಂ ಜಿಲ್ಲಾ ಪೊಲೀಸರಿಂದ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಂದ್ರ ತಂದೆ ಜಿತೇಂದ್ರ ಗೆಹ್ಲೋಟ್, ಯಾರೂ ಬೇಕಾದರೂ ಆರೋಪ ಮಾಡಬಹುದು. ನಾವು ಮಾಧ್ಯಮದ ಮುಂದೆ ಎಲ್ಲ ಸತ್ಯಾಂಶ ಇಡುತ್ತೇವೆ ಎಂದಿದ್ದಾರೆ.




