ಮಂಜೇಶ್ವರ : ಮಂಜೇಶ್ವರ ವಿದ್ಯುತ್ ಸೆಕ್ಷನ್ ಕಚೇರಿಯಲ್ಲಿ ತುರ್ತು ಸಂದರ್ಭ ಗಳಲ್ಲಿ ಅನಾಹುತಗಳನ್ನು ತಪ್ಪಿಸಲು ವಿದ್ಯುತ್ ಸಿಬ್ಬಂದಿಗಳನ್ನು ಕೊಂಡೊಯ್ಯಬೇಕಾದ ಗುತ್ತಿಗೆ ಜೀಪ್ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿರುವುದಾಗಿ ಗ್ರಾಹಕರಿಂದ ಆರೋಪ ಕೇಳಿ ಬಂದಿದೆ.ಮಂಜೇಶ್ವರ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ಹಲವು ಕಾರಣಗಳಿಂದ ಮೊಟಕುಗೊಳ್ಳುತ್ತಿರುವ ವಿದ್ಯುತನ್ನು ಮರು ಸ್ಥಾಪಿಸಲು ಸಿಬ್ಬಂದಿಗಳಿಗೆ ಸೂಕ್ತ ಕಾಲದಲ್ಲಿ ಗುತ್ತಿಗೆ ಪಡೆದ ವಾಹನದ ಸೌಕರ್ಯ ಇಲ್ಲದೆ ಗ್ರಾಹಕರು ತಾಸುಗಳ ತನಕ ಕತ್ತಲಲ್ಲಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಗುತ್ತಿಗೆ ವಾಹನದ ಚಾಲಕ ಜೀಪನ್ನು ವಿದ್ಯುತ್ ಇಲಾಖೆಯಲ್ಲಿ ನಿಲುಗಡೆಗೊಳಿಸದೆ ವೈಯುಕ್ತಿಕ ಆವಶ್ಯಕ್ಕೆ ಬಳಸುತಿದ್ದಾನೆಂಬ ಆರೋಪ ಕೂಡಾ ಕೇಳಿ ಬಂದಿದೆ. ತರ್ತು ಸಂರ್ಭಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬುದಾಗಿ ಗ್ರಾಹಕರು ಪ್ರಶ್ನಿಸಿದ್ದಾರೆ.ವಿಶು ದಿನಕ್ಕೆ ಮೊದಲಿನ ರಾತ್ರಿ ಮಂಜೇಶ್ವರದ ಹಲವೆಡೆ ಸಂಜೆ ೬.೩೦ ರಿಂದ ರಾತ್ರಿ ೧೦ ತನಕ ವಿದ್ಯುತ್ ಮೊಟಕುಗೊಂಡಿದ್ದು ಈ ಬಗ್ಗೆ ಗ್ರಾಹಕರು ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನಮಗೆ ಬರಲು ಜೀಪ್ ಇಲ್ಲವೆಂಬ ಉತ್ತರ ಲಭಿಸುತಿತ್ತೆನ್ನಲಾಗಿದೆ. ಇದು ಮಂಜೇಶ್ವರ ವಿದ್ಯುತ್ ಸೆಕ್ಷನ್ ನ ಪ್ರತಿನಿತ್ಯದ ಕತೆಯಾಗಿದ್ದು ಜೀಪ್ ಚಾಲಕನ ಕರ್ತವ್ಯ ಲೋಪಕ್ಕೆ ಗ್ರಾಹಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಮಂಜೇಶ್ವರ ಗ್ರಾಹಕ ವೇದಿಕೆ ಕಾರ್ಯದರ್ಶಿ ವಿದ್ಯುತ್ ಇಲಾಖೆಯ ಗುತ್ತಿಗೆ ವಾಹನ ಚಾಲಕನ ಕರ್ತವ್ಯ ಲೋಪದ ಬಗ್ಗೆ ಈಗ ಮಾತ್ರವಲ್ಲ ಈ ಮೊದಲು ಕೂಡಾ ಹಲವಾರು ದೂರುಗಳು ಲಭಿಸಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ವಿದ್ಯುತ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.