ನವದೆಹಲಿ: ಆರೋಗ್ಯಕ್ಕೆ ಹಾನಿಯುಂಟು ಮಾಡುವ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಇನ್ಮುಂದೆ ಸಮೋಸ, ಜಿಲೇಬಿ ಸೇರಿದಂತೆ ಇನ್ನಿತರೆ ತಿನಿಸುಗಳಿಗೂ ಸಿಗರೇಟ್ ಪ್ಯಾಕೆಟ್ನಲ್ಲಿರುವಂತೆ ಎಚ್ಚರಿಕೆ ನೀಡಲು ಮುಂದಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಆದೇಶದ ಹಿನ್ನೆಲೆ ನಾಗ್ಪುರದ ಸಂಸ್ಥೆಯ ತಜ್ಞರು ಭಾರತೀಯ ತಿಂಡಿಗಳ ಬಗ್ಗೆ ಅಧ್ಯಯನ ನಡೆಸಿದೆ. ಈ ವರದಿಯಲ್ಲಿ ಎಣ್ಣೆ ಮತ್ತು ಸಕ್ಕರೆ ಬಳಸಿ ತಯಾರಿಸುವ ತಿಂಡಿಗಳಲ್ಲಿ ಕೊಬ್ಬು ಮತ್ತು ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ ಸಮೋಸ ಮತ್ತು ಜಿಲೇಬಿ ಪದೇ ಪದೇ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಇದು ಹಲವು ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದೆ.

ಈ ರೀತಿಯ ತಿನಿಸುಗಳನ್ನು ಅತೀ ಹೆಚ್ಚಾಗಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಈಗಾಗಲೇ ಭಾರತದ ನಗರಗಳ 100 ಜನರ ಪೈಕಿ 5 ಜನರ ತೂಕ ಅತಿಯಾಗಿ ಹೆಚ್ಚಾಳವಾಗಿದೆ. ಇದರಿಂದ ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆಯನ್ನು ಹೆಚ್ಚಿಸುತ್ತದೆ. ಅಂದರೆ ತಿನ್ನಲೇಬಾರದು ಅಂತಿಲ್ಲ, ಆದರೆ ಇತಿಮಿತಿಯಲ್ಲಿ ಸೇವನೆ ಮಾಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಇಂತಹ ತಿನಿಸುಗಳನ್ನು ಪ್ರತಿನಿತ್ಯ ಸೇವನೆ ಮಾಡೋದ್ರಿಂದ ಆರೋಗ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ. ಹೀಗಾಗಿ ಜಂಕ್ ಫುಡ್ ಕಡಿಮೆ ಮಾಡಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದೆ. ಹೀಗಾಗಿ ಸದ್ಯ ನಾಗ್ಪುರದಲ್ಲಿ ಜಂಕ್ ಫುಡ್ ತಿನ್ನೋದು ಆರೋಗ್ಯಕ್ಕೆ ಹಾನಿಕಾರಕ ಎಂಬ ಬೋರ್ಡ್ ಹಾಕುವ ಅಭಿಯಾನ ಶುರು ಮಾಡಲಾಗಿದೆ. ಜನಪ್ರಿಯ ಆಹಾರ ಮಳಿಗೆಗಳ ಪಕ್ಕದಲ್ಲಿ ಎಚ್ಚರಿಕೆ ಪೋಸ್ಟರ್ಗಳನ್ನು ಹಾಕಲಾಗಿದ್ದು, ಸಕ್ಕರೆ, ಕೊಬ್ಬಿನ ಬಗ್ಗೆ ಸ್ಪಷ್ಟ ಮಾಹಿತಿ ಹಾಗೂ ಪದೇ ಪದೇ ಸೇವನೆಯಿಂದ ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ವಿವರಿಸುವ ಸಂದೇಶಗಳ ಉಲ್ಲೇಖಿಸಲಾಗಿದೆ.
ಈ ಕ್ರಮಕ್ಕೆ ಕಾರಣವೇನು?
ಭಾರತದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸಮಸ್ಯೆ ತೀವ್ರವಾಗಿವೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿದ್ದು, ಕರಿದ ಮತ್ತು ಸಕ್ಕರೆಯುಕ್ತ ತಿಂಡಿಗಳ ಸೇವನೆಯಿಂದ ಈ ಕಾಯಿಲೆಗಳಿಗೆ ಪ್ರಮುಖ ಕಾರಣ ಎಂದು ತಿಳಿಸಿದೆ.
ಇದು ನಿಷೇಧವಲ್ಲ, ಆದರೆ ಮಿತವಾಗಿ ಸೇವಿಸಲು ಸೂಚಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ನಗರಗಳಲ್ಲಿ ಈ ರೀತಿಯ ಪೋಸ್ಟರ್ ಅಂಟಿಸಲು ಚಿಂತಿಸಿದ್ದು, ಸಿಗರೇಟ್ ಮೇಲೆ ಇರುವ ಹಾಗೆಯೇ ತಿನಿಸುಗಳ ಮೇಲೆಯೂ ದುಷ್ಪರಿಣಾಮಗಳ ಎಚ್ಚರಿಕೆ ನೀಡಲು ಮುಂದಾಗಿದೆ.




