ಉಪ್ಪಳ: ಉಪ್ಪಳ ಬಸ್ನಿಲ್ದಾಣದಲ್ಲಿ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ ತಗಲುವ ಭೀತಿ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಕಂಡುಬರುತ್ತಿದ್ದರೂ ಅಧಿಕಾರಿಗಳು ಶುಚೀಕರಣಕ್ಕೆ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟುಮಾಡಿದೆ. ಹಲವು ತಿಂಗಳಿಂದಲೂ ತ್ಯಾಜ್ಯ ರಾಶಿ ತುಂಬಿಕೊಂಡಿದ್ದು, ಶುಚೀಕರಣಗೊಳಿಸದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬಸ್ಗಾಗಿ ಕಾಯುವ ಮಹಿಳೆಯರು, ಮಕ್ಕಳ ಸಹಿತ ಹಲವು ಮಂದಿ ದುರ್ವಾಸನೆ ಬೀರುತ್ತಿರುವ ತ್ಯಾಜ್ಯದ ಮಧ್ಯೆಕುಳಿತುಕೊಳ್ಳಬೇಕಾದ ಅವಸ್ಥೆ ಉಂಟಾಗಿರುವುದಾಗಿ ದೂರಲಾಗಿದೆ. ದೂರು ನೀಡಲಾಗಿದ್ದರೂ ಕ್ರಮಯಿಲ್ಲ. ಅಲ್ಲದೆ ಪಂಚಾಯತ್ ಅಧಿಕಾರಿಗಳು ಈ ದಾರಿಯಾಗಿ ಸಾಗುತ್ತಿದ್ದರೂ ಕಂಡು ಕಾಣದಂತೆ ಮಾಡುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಎರಡು ವಾರದ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಕೂಡಲೇ ಶುಚೀಕರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದೆನ್ನಲಾಗಿದೆ. ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸಿ ಶುಚೀಕರಣಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.