ಉಪ್ಪಿನಂಗಡಿ : ಇಲ್ಲಿನ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟಿಗೆ ಗೇಟ್ ಅಳವಡಿಸಿ ನೀರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ಸನ್ನಿಧಿಯ ಸಂಗಮ ಪ್ರದೇಶದಲ್ಲಿರುವ ಉದ್ಭವಲಿಂಗ ಜಲಾವೃತಗೊಂಡಿದೆ. ನೀರು ಸಂಗ್ರಹವಾಗುತ್ತಿರುವುದು ಕೃಷಿಕರಿಗೆ ಸಂತಸ ತಂದರೆ, ಲಿಂಗ ಜಲಾವೃತಗೊಂಡಿರುವುದು ಭಕ್ತರಲ್ಲಿ ನಿರಾಶೆ ಮೂಡಿಸಿದೆ.

ಬಿಳಿಯೂರಿನಲ್ಲಿ ಸಂಪರ್ಕ ಸೇತುವೆ ಸಹಿತ ನಿರ್ಮಿತ ಈ ಅಣೆಕಟ್ಟಿಗೆ 4 ಮೀಟರ್ ಎತ್ತರದ ಗೇಟ್ ಅಳವಡಿಸಿದಾಗ, ನೀರು ನೆಕ್ಕಿಲಾಡಿವರೆಗೆ ಮಾತ್ರ ತುಂಬುತ್ತದೆ ಎಂದು ಪ್ರಾರಂಭದಲ್ಲಿ ತಿಳಿಸಲಾಗಿತ್ತು. ಆದರೆ ಯೋಜನೆ ಪೂರ್ಣಗೊಂಡ ನಂತರ ಹಿನ್ನೀರು ಉಪ್ಪಿನಂಗಡಿ ಗ್ರಾಮ ವ್ಯಾಪ್ತಿಯವರೆಗೂ ಹರಡಿದ್ದು, ಪಾರಂಪರಿಕ ಶಿವರಾತ್ರಿ ಮಖೆ ಸೇರಿದಂತೆ ಮೂರೂ ಮಖೆ ಜಾತ್ರೆಗಳಲ್ಲಿ ನಡೆಯುತ್ತಿದ್ದ ಪೂಜಾ ಕ್ರಮ ವ್ಯತ್ಯಯಗೊಂಡಿತ್ತು.




