ಬಂಟ್ವಾಳ: ಜಲ್ಲಿ ಸಾಗಾಟದ ಲಾರಿಯೊಂದು ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾದ ಘಟನೆ ನ.9ರಂದು ಬೆಳಿಗ್ಗೆ ಬಂಟ್ವಾಳ ಸಮೀಪದ ಲೊರೆಟ್ಟೋದಲ್ಲಿ ನಡೆದಿದೆ.
ಮೈಸೂರು ಮೂಲದ ಕೃಷ್ಣ ಅರಸ ಎಂಬವರ ಕಾರಿಗೆ ಲಾರಿ ಡಿಕ್ಕಿಯಾಗಿದ್ದು, ಕೃಷ್ಣ ಅರಸ ಅವರ ಮಗಳು ಮೂಡಬಿದಿರೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ದೀಪಾವಳಿ ರಜೆ ನಿಮಿತ್ತ ಊರಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಮೂಡಬಿದಿರೆಯ ಕಡೆಗೆ ತೆರಳುವ ವೇಳೆ ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಅದೃಷ್ಟವಶಾತ್ ಕಾರು ಚಾಲಕ ಕೃಷ್ಣ ಅವರಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯರಿಂದ ಪ್ರತಿಭಟನೆ:
ಬಿ.ಸಿ ರೋಡಿನಿಂದ ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ ಕಂಪೆನಿಯವರು ಕಾಮಗಾರಿ ನಡೆಸಲು ಜಲ್ಲಿಯನ್ನು ಕುಪ್ಪೆಪದವು ಎಂಬಲ್ಲಿರುವ ಜಲ್ಲಿ ಪ್ಲ್ಯಾಂಟ್ ನಿಂದ ಬೃಹತ್ ಗಾತ್ರದ ಲಾರಿಗಳ ಮೂಲಕ ತರುತ್ತಾರೆ. ಆದರೆ ಕಂಪೆನಿಯ ಲಾರಿಯ ಚಾಲಕರು ಎ.ಸಿ.ಹಾಕಿಕೊಂಡು ಕಿವಿಗೊಂದು ಇಯರ್ ಪೋನ್ ಸಿಕ್ಕಿಸಿ ಹಾಡು ಕೇಳಿಕೊಂಡು ಅಥವಾ ಮೊಬೈಲ್ ನಲ್ಲಿ ಹರಟೆ ಹೊಡೆಯುತ್ತಾ ರಸ್ತೆಯಲ್ಲಿ ಬರುವ ಇತರ ವಾಹನಗಳ ಬಗ್ಗೆ ಗಮನವಿಲ್ಲದೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬರುತ್ತಾರೆ ಎಂಬುದು ಸ್ಥಳೀಯರ ವಾದ.
ಇಂದು ಅಪಘಾತ ನಡೆದ ಜಾಗದಲ್ಲಿ ಶಾಲೆಯಿದ್ದು, ಮಕ್ಕಳು ಶಾಲೆಗೆ ಬರುವ ಸಮಯದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡಿದರೆ ಅನಾಹುತಗಳು ನಡೆಯಬಹುದು ಎಂದು ಇಲ್ಲಿ ಸೇರಿದ ಜನರು ಅರೋಪ ಮಾಡಿದ್ದಾರೆ. ಕಂಪನಿ ವಿರುದ್ದ ಪ್ರಕರಣ ದಾಖಲಿಸಿ ಮತ್ತು ಕಂಪನಿ ಲಾರಿಗಳಿಗೆ ಸ್ಪೀಡ್ ಕಂಟ್ರೋಲ್ ಕಿಟ್ ಹಾಕಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಕಂಪನಿ ಮತ್ತು ಲಾರಿ ಚಾಲಕರ ವಿರುದ್ದ ಸಾರ್ವಜನಿಕರು ರೊಚ್ಚಿಗೆದ್ದ ಘಟನೆ ನಡೆಯಿತು. ಆ ಮಾರ್ಗದಲ್ಲಿ ಬರುವ ಕಂಪೆನಿಯ ಎಲ್ಲಾ ಲಾರಿಗಳನನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಪೋಲಿಸರು ಚದುರಿಸಿದರು.
ಸ್ಥಳಕ್ಕೆ ಟ್ರಾಫಿಕ್ ಎಸ್.ಐ ಸುತೇಶ್ ಮತ್ತು ಸಂಜೀವ ಹಾಗೂ ಎ.ಎಸ್.ಐ ಸುರೇಶ್ ಪಡಾರ್, ಸಿಬ್ಬಂದಿಗಳಾದ ರಾಜು, ವಿವೇಕ್, ಸಂತೋಷ ಬೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.