ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆ ಸುರಿದಿದೆ. ಬೆಳಗ್ಗೆ ಮಳೆ ಬಿರುಸು ಪಡೆದು ಬಳಿಕ ಸ್ವಲ್ಪ ಕಾಲ ತುಸು ಕ್ಷೀಣಿಸಿತ್ತು. ಸಂಜೆ ಬಳಿಕ ಮತ್ತೆ ಉತ್ತಮ ಮಳೆಯಾಗಿತ್ತು. ಮಳೆಯ ಜತೆ ಗಾಳಿಯ ವೇಗವೂ ಹೆಚ್ಚು ಇತ್ತು.

ಮಂಗಳೂರು ನಗರದಲ್ಲಿ ಮಧ್ಯಾಹ್ನ ಬಳಿಕ ಬಿರುಸಿನ ಮಳೆ ಸುರಿದಿತ್ತು. ಬೆಳ್ತಂಗಡಿ ತಾಲೂಕಿನಲ್ಲಿ ಮುಂಜಾನೆಯಿಂದ ಭಾರಿ ಗಾಳಿ ಸಹಿತ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಸಹಿತ ನೆರಿಯ, ಲಾಯಿಲ ಕಿಲ್ಲೂರು ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ತಡೆಯಾಗಿದೆ. ಕೆಲವು ಕಡೆಗಳಲ್ಲಿ ಮನೆಗೆ ಹಾನಿಯಾಗಿದೆ.
ಕರಾವಳಿ ಭಾಗದಲ್ಲಿ ಜು. 26ರಿಂದ ಜು. 28ರ ವರೆಗೆ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ.
ಉಪ್ಪಿನಂಗಡಿಯಲ್ಲಿ ಬೀಸಿದ ಭಾರೀ ಮಳೆಗೆ ಅಲ್ಲಲ್ಲಿ ಮರಗಳುರುಳಿ ಬಿದ್ದು ಅವಾಂತರ ಸೃಷ್ಟಿಯಾಗಿದ್ದು, ಉಪ್ಪಿನಂಗಡಿ-ಸುಬ್ರಹ್ಮಣ್ಯ ಕ್ರಾಸ್ ಬಳಿ ರಸ್ತೆ ಸಂಚಾರಕ್ಕೆ ತಡೆಯುಂಟಾದ ಘಟನೆ ನಡೆದಿದೆ.




