ಸನಾತನ ಹಿಂದೂ ಧರ್ಮದ ಪ್ರಕಾರ ಪ್ರತಿದಿನವೂ ದೇವರನ್ನು ಪೂಜಿಸುತ್ತೇವೆ. ಆದರೆ ದೇವರ ಕಾರ್ಯ ಮಾಡುವಾಗ ಕೆಲವೊಂದು ತಪ್ಪುಗಳು ಅರಿವಿಲ್ಲದೆಯೇ ಮಾಡಿಬಿಡುತ್ತೇವೆ. ಪುರಾಣ ಹಾಗೂ ವೈದಿಕ ಗ್ರಂಥಗಳಲ್ಲಿನ ಉಲ್ಲೇಖದಂತೆ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಹಾಗಾದರೆ ಆ ನಿಯಮಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ.

ದೇವರಿಗೆ ನಮಸ್ಕರಿಸುವಾಗ ಎಂದಿಗೂ ಒಂದು ಕೈಯನ್ನು ಬಳಸಬಾರದು. ಹೀಗೆ ಮಾಡುವುದರಿಂದ ವ್ಯಕ್ತಿಯಲ್ಲಿರುವ ಸದ್ಗುಣಗಳು ನಾಶವಾಗುವವು. ದೇವರಿಗೆ ಕೈ ಮುಗಿಯುವಾಗ ಎರಡೂ ಕೈಗಳನ್ನು ಜೋಡಿಸಿ ತಲೆ ಬಾಗಿಸಿ ನಮಸ್ಕರಿಸಬೇಕು.
ದೇವರ ನಾಮ, ಮಂತ್ರಗಳನ್ನು ಜಪಿಸುವಾಗ ಯಾವಾಗಲೂ ಬಲಗೈಯನ್ನು ಬಟ್ಟೆಯಿಂದ ಅಥವಾ ಹಸುವಿನ ಹಾಲಿರುವ ಪಾತ್ರೆಯೊಳಗೆ ಮುಚ್ಚಬೇಕು. ಮಂತ್ರ ಜಪಿಸಿದ ನಂತರ ಆಸನದ ಕೆಳಗಿರುವ ನೆಲವನ್ನು ಮುಟ್ಟಬೇಕು.
ನಿದ್ದೆ ಮಾಡುತ್ತಿರುವ ವ್ಯಕ್ತಿಯ ಪಾದಗಳನ್ನು ಎಂದಿಗೂ ಸ್ಪರ್ಶಿಸಬಾರದು. ಸನಾತನ ಧರ್ಮದ ಪ್ರಕಾರ ಮಲಗಿರುವ ವ್ಯಕ್ತಿಯ ಪಾದಗಳನ್ನು ಅವನು ಮರಣ ಹೊಂದಿದಾಗ ಮಾತ್ರ ಮುಟ್ಟಲಾಗುತ್ತದೆ.
ದೀಪವನ್ನು ಎಂದಿಗೂ ಇನ್ನೊಂದು ದೀಪದಿಂದ ಬೆಳಗಿಸಬಾರದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ದೀಪವನ್ನು ಬೆಂಕಿಕಡ್ಡಿ ಅಥವಾ ಇನ್ನಾವುದರಿಂದಲಾದರೂ ಬೆಳಗಬೇಕು. ತುಪ್ಪದ ದೀಪವನ್ನು ನಿಮ್ಮ ಎಡಭಾಗದಲ್ಲಿ ಅಂದರೆ ದೇವರ ಬಲಭಾಗದಲ್ಲಿ ಇರಿಸಬೇಕು.
ಪೂಜೆ ಮಾಡುವಾಗ ನೀವು ಪೂರ್ವದಿಕ್ಕಿಗೆ ಕುಳಿತುಕೊಳ್ಳಬೇಕು. ಘಂಟೆ, ಧೂಪ, ಶಂಖ, ನೀರಿರುವ ಪಂಚಪಾತ್ರೆಯನ್ನು ಹಾಗೂ ಪೂಜಾ ಸಾಮಾಗ್ರಿಗಳನ್ನು ನಿಮ್ಮ ಎಡಭಾಗದಲ್ಲಿ ಇಟ್ಟುಕೊಳ್ಳಿ.




