ಉಡುಪಿ: ಯಾರ ಬಗ್ಗೆಯೂ ತಾನು ಕೀಳಾಗಿ ಮಾತಾಡಿಲ್ಲ. ನಾನು ಹೇಳದೆ ಇರುವುದನ್ನು ಹೇಳಿದ್ದೇನೆ ಎನ್ನುವರು ದಾಖಲೆ ಕೊಡಲಿ. ಅವರು ದಾಖಲೆ ಸಮೇತ ನೀಡಿದರೆ ನಾನು ಉತ್ತರ ನೀಡುತ್ತೇನೆ, ಅವರೊಂದಿಗೆ ಒಟ್ಟಿಗೆ ಚರ್ಚೆಗೆ ಕೂಡ ಸಿದ್ಧನಿದ್ದೇನೆ ಎಂದು ಉಡುಪಿ- ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸವಾಲು ಹಾಕಿದರು.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಹಿಂದಿ, ಇಂಗ್ಲಿಷ್ ಬರಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾದ ಕುರಿತಂತೆ ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದ ಅವರು, ನಾನು ಆ ಮಾತುಗಳನ್ನು ಆಡಿದ್ದೇನೆ ಎಂದು ಹೇಳಿಕೊಂಡು ಅವರು ತಿರುಗುತ್ತಿದ್ದಾರೆ. ನಾನು ಯಾರ ಬಗ್ಗೆಯೂ ಕೀಳಾಗಿ ಮಾತಾಡಿಲ್ಲ. ಅವರ ಪಕ್ಷದವರೇ ಅವರ ಬಗ್ಗೆ ಕೀಳಾಗಿ ಮಾತಾಡಿರಬಹುದು, ಅದು ಗೊತ್ತಿಲ್ಲ. ಆದರೆ ನಾನು ರಾಜಕೀಯ ಜೀವನದಲ್ಲಿ ಎಂದೂ ಯಾವ ಪಕ್ಷದವರ ಬಗ್ಗೆಯೂ ಕೀಳಾಗಿ ಮಾತಾಡಿಲ್ಲ, ಟೀಕೆ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. 1994ರಲ್ಲೇ ಶಾಸಕನಾಗಿ ಆಯ್ಕೆಯಾಗಿ ಅಸೆಂಬ್ಲಿಯಲ್ಲಿ ಮಾತನಾಡುತ್ತಿದ್ದೇನೆ, ನನ್ನ ಒಂದೂ ಮಾತನ್ನು ಕಡತದಿಂದ ತೆಗೆದ ಉದಾಹರಣೆ ಇಲ್ಲ. ಆರೋಗ್ಯಕರ ಚುನಾವಣೆ ನಡೆಯಬೇಕು ಎಂದು ವಾದಿಸುವವರಲ್ಲಿ ನಾನೂ ಒಬ್ಬ ಎಂದು ಅವರು ಸ್ಪಷ್ಟಪಡಿಸಿದ್ದಾರೆ.