
ಚೆನ್ನೈ : ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಇಂದು ಲೋಕಾರ್ಪಣೆಗೊಂಡಿದೆ. ತಮಿಳುನಾಡಿನ ಪಂಬನ್ನಲ್ಲಿ ನಿರ್ಮಿಸಲಾದ ಈ ಬ್ರಿಡ್ಜ್ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ವೇಳೆ ಅವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಹೊಸ ಬ್ರಿಡ್ಜ್ ತಮಿಳುನಾಡು ಪ್ರವಸೋದ್ಯಮಕ್ಕೆ ಇನ್ನಷ್ಟು ವೇಗವನ್ನು ನೀಡಲಿದ್ದು, ಈ ಬ್ರಿಡ್ಜ್ ರಾಮೇಶ್ವರಂಗೆ ತೆರಳುವ ಭಕ್ತರಿಗೆ ಹಾಗೂ ಧನುಷ್ಕೋಡಿ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ.

ಹಳೇ ಪಂಬನ್ ರೈಲು ಸೇತುವೆಯನ್ನ 111 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದು, ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಿಸಲಾಗಿದೆ. ಹಳೇ ಬ್ರಿಡ್ಜ್ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ನೂತನ ಬ್ರಿಡ್ಜ್ ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತೆ. ಇದು ಎಲೆಕ್ಟ್ರಿಕಲ್ ಆಟೋಮೆಕ್ಯಾನಿಕಲ್ ತಂತ್ರಜ್ಞಾನ ಒಳಗೊಂಡಿದೆ. ಹಳೇ ಬ್ರಿಡ್ಜ್ ತೆರೆದುಕೊಳ್ಳಲು 45 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಆದರೆ ಹೊಸ ಬ್ರಿಡ್ಜ್ 5.3 ನಿಮಿಷದಲ್ಲಿ ತೆರೆದುಕೊಳ್ಳಲಿದೆ. ಸುಮಾರು 2.5 ಕಿಲೋ ಮೀಟರ್ ಉದ್ದದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ರೈಲು ಸೇತುವೆ ಇದಾಗಿದ್ದು, ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಮುಖ್ಯಭೂಮಿಯಿಂದ ರಾಮೇಶ್ವರಂಗೆ 5 ನಿಮಿಷದ ಪ್ರಯಾಣಿಸಬಹುದಾಗಿದೆ. ಒಟ್ಟು 535 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವರ್ಟಿಕಲ್ ಲಿಫ್ಟ್ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ.




