ಚೆನ್ನೈ: ಕರೂರ್ ನಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ ನಂತರದ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಪ್ರಚಾರ ಸಭೆಗಳಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿ ಕಟ್ಟುನಿಟ್ಟಾದ ಜನಸಂದಣಿ ನಿರ್ಬಂಧಗಳನ್ನು ಹೇರುತ್ತಿದ್ದಾರೆ.

ಪುದುಚೆರಿಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದ ವೇಳೆ ಟಿವಿಕೆ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಬುಸ್ಸಿ ಆನಂದ್ ಅವರು ಸ್ಥಳಾವಕಾಶವಿದೆ ಎಂದು ಘೋಷಿಸಿ ಹೆಚ್ಚಿನ ಜನರನ್ನು ಒಳಗೆ ಕರೆದ ವೇಳೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಕಿಡಿ ಕಾರಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಐಪಿಎಸ್ ಅಧಿಕಾರಿ ಇಶಾ ಸಿಂಗ್ ಅವರು ಹಠಾತ್ತನೆ ಬುಸ್ಸಿ ಆನಂದ್ ಅವರಿಂದ ಮೈಕ್ರೋಫೋನ್ ಕಸಿದುಕೊಂಡು, ಅವರ ಭಾಷಣವನ್ನು ತಡೆದು “ನೀವು ನನಗೆ ಏನು ಮಾಡಬೇಕೆಂದು ಹೇಳುತ್ತೀರಾ…40 ಜನರು ಸಾವನ್ನಪ್ಪಿದ್ದರು ” ಎಂದು ಅವರು ಅನುಮೋದಿತ ಸಂಖ್ಯೆಗಿಂತ ಹೆಚ್ಚಿನ ಪ್ರವೇಶವನ್ನು ನಿರಾಕರಿಸಿ ಒಳ ಬರುತ್ತಿದ್ದವರನ್ನು ತಡೆದರು.
ಸಭೆಗೆ 5,000 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. QR-ಕೋಡ್ ಪಾಸ್ಗಳನ್ನು ಹೊಂದಿರುವವರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗಿತ್ತು. ಭದ್ರತಾ ಭಯವನ್ನು ಹೆಚ್ಚಿಸಿದ್ದರೂ ಸ್ಥಳಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.




