ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕೆ. ಸುರೇಂದ್ರನ್ ಶನಿವಾರ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಉಪ್ಪಳ ಪೇಟೆಯಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಹಿತ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು ತಾಲೂಕು ಕಚೇರಿ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು ಅವ್ಯವಸ್ಥೆ ಯಿಂದ ಕೂಡಿದೆ. ರಾಜ್ಯದಲ್ಲಿ ಅದಲಿ ಬದಲಿ ಸರಕಾರ ಆಡಳಿತ ನಡೆಸಿದರೂ ಯಾವ ರೀತಿಯ ಅಭಿವೃದ್ಧಿಯೂ ಉಂಟಾಗಿಲ್ಲ ಎಂಬುದಕ್ಕೆ ತಾಲೂಕು ಕಚೇರಿ ಉದಾಹರಣೆಯಾಗಿದೆ ಎಂದರು.
ಈ ಚುನಾವಣೆಯಲ್ಲಿ ನಾನು ಗೆದ್ದರೆ ಮಂಜೇಶ್ವರದಲ್ಲಿ ಮಿನಿ ಸಿವಿಲ್ ಸ್ಟೇಶನ್ ನಿರ್ಮಿಸುವುದಾಗಿ ಅವರು ಭರವಸೆ ನೀಡಿದರು. ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ ವಿಜಯ ಕುಮಾರ್ ರೈ, ಸುನಿಲ್ ಕುಮಾರ್, ಆದರ್ಶ್ ಬಿ.ಎಂ. ಮಂಜೇಶ್ವರ,ಎ.ಕೆ. ಕಯ್ಯಾರ್, ಗೋಪಾಲ ಶೆಟ್ಟಿ ಅರಿಬೈಲು, ಕೆ.ವಿ. ಭಟ್, ವಸಂತ ಕುಮಾರ್ ಮಯ್ಯ ಉಪಸ್ಥಿತರಿದ್ದರು.




