ಮಂಗಳೂರು: ಪ್ರಸಕ್ತ ಋತುವಿನ ಕಂಬಳದ ದಿನಾಂಕ ನಿಗದಿ ಮಾಡುವ ಮಹತ್ವದ ಸಭೆ ಸೆ. 28ರಂದು ನಡೆಯಲಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯನ್ನೊಳಗೊಂಡ ಜಿಲ್ಲಾ ಕಂಬಳ ಸಮಿತಿ ಸಭೆ ಸೆ. 28ರಂದು ಅಪರಾಹ್ನ 3.30ಕ್ಕೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ.
ಮುಂದಿನ ಸೀಸನ್ನ ಕಂಬಳದ ಸಮಯ ಪಾಲನೆ, ನಿಯಮ, ಕೋಣಗಳ ಸ್ಪರ್ಧೆಗಳ ಸಮಯ ಪಾಲನೆ, ಕಂಬಳಕ್ಕೆ ಸರಕಾರದ ಪ್ರೋತ್ಸಾಹ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ರಾಜ್ಯ ಸರಕಾರವು ದಕ್ಷಿಣ ಕನ್ನಡ ಹಾಗೂ ಉಡುಪಿಯ ಕಂಬಳಕ್ಕೆ ಒಟ್ಟು 40 ಲಕ್ಷ ರೂ. ಬಿಡುಗಡೆ ಮಾಡಿತ್ತು. ಇದೀಗ ಹೆಚ್ಚುವರಿ ಅನುದಾನವೂ ಬಿಡುಗಡೆಯಾಗಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದ್ದಾರೆ.




