ಬೆಂಗಳೂರು: ಮುಂಬರುವ ‘ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಚಿತ್ರದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ವಿಭಿನ್ನ ರೀತಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಕಾಮಾಖ್ಯ ನರೈನ್ ಸಿಂಗ್ ನಿರ್ದೇಶನ ಮತ್ತು ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ‘ಕೇರಳ ಸ್ಟೋರಿ 2’ ಚಿತ್ರವು, ಟ್ರೇಲರ್ ಬಿಡುಗಡೆಯಾದ ಬಳಿಕ ಭಾರೀ ಚರ್ಚೆಗೆ ಗುರಿಯಾಗಿದ್ದು ಕೇರಳದಲ್ಲಿ ಆಕ್ರೋಶಕ್ಕೂ ಗುರಿಯಾಗಿದೆ. ವಿಶೇಷವಾಗಿ ಚಿತ್ರದಲ್ಲಿ ಧಾರ್ಮಿಕ ಮತಾಂತರ ಮತ್ತು ಬಲವಂತವಾಗಿ ಗೋಮಾಂಸ ತಿನ್ನಿಸುವುದನ್ನು ಚಿತ್ರಿಸಿರುವ ದೃಶ್ಯಗಳ ಸುತ್ತ ಆಕ್ಷೇಪವೂ ವ್ಯಕ್ತವಾಗಿದೆ.
ಪ್ರಕಾಶ್ ರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ರವಿವಾರ ಹಂದಿಮಾಂಸ, ಗೋಮಾಂಸ ಮತ್ತು ಮೀನಿನ ಖಾದ್ಯಗಳ ಚಿತ್ರಗಳನ್ನು ಪೋಸ್ಟ್ ಮಾಡಿ ವಿಭಿನ್ನ ರೀತಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ನಿಜವಾದ #ಕೇರಳ ಸ್ಟೋರಿ ಎಂದರೆ ಹಂದಿಮಾಂಸ, ಗೋಮಾಂಸ ಮತ್ತು ಮೀನು ಸಸ್ಯಾಹಾರಿ ಊಟದೊಂದಿಗೆ ಹೇಗೆ ಸಹಬಾಳ್ವೆ ನಡೆಸುತ್ತವೆ ಮತ್ತು ಅವರೆಲ್ಲರೂ ಸಾಮರಸ್ಯದಿಂದ ಬದುಕುತ್ತಾರೆ ಎಂಬುದು. ದಯವಿಟ್ಟು #ಜಸ್ಟ್ ಆಸ್ಕಿಂಗ್… ಸವಿಯಿರಿ ಎಲ್ಲರಿಗೂ ಶುಭ ರವಿವಾರ ” ಎಂದು ಬರೆದಿದ್ದಾರೆ.
‘ಕೇರಳ ಸ್ಟೋರಿ 2’ ಚಿತ್ರದ ವಿರುದ್ಧ ಕೇರಳದ ಆಡಳಿತಾರೂಢ ಸಿಪಿಐ(ಎಂ) ನ ವಿದ್ಯಾರ್ಥಿ ಘಟಕ ಎಸ್ಎಫ್ಐ ಗೋಮಾಂಸ ಉತ್ಸವ ಆಯೋಜಿಸಿ ಆಕ್ರೋಶ ಹೊರ ಹಾಕಿತ್ತು.




