ಟ್ಯೂಷನ್ ಗೆ ಹೋಗಿದ್ದ ಬಾಲಕನ ಅಪಹರಿಸಿ ಬರ್ಬರವಾಗಿ ಕೊಂದ ಕಿರಾತಕರು..!!

Share with

ಟ್ಯೂಷನ್​​ಗೆ ಹೋಗಿದ್ದ 13 ವರ್ಷದ ಬಾಲಕನ ಅಪಹರಿಸಿ ಜೀವ ತೆಗೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಪಹರಣ ಬಳಿಕ ಕಿರಾತಕರು ಬಾಲಕನ ತಂದೆ ಬಳಿ 5 ಲಕ್ಷ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಕೊನೆಗೆ ನೋಡಿದ್ರೆ ಜೀವವನ್ನೇ ತೆಗೆದು ಪರಾರಿ ಆಗಿದ್ದರು. ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಇಬ್ಬರು ಆರೋಪಿಗಳಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. 

ಏನಿದು ಪ್ರಕರಣ..?   

ನಿಶ್ಚಿತ್ (13) ಅಪಹರಣಕಾರರ ಕೃತ್ಯಕ್ಕೆ ಬಲಿಯಾದ ಬಾಲಕ. ಎಂದಿನಂತೆ ನಿಶ್ಚಿತ್ ಸ್ಕೂಲ್ ಮುಗಿಸಿ ಸಂಜೆ 5.30 ಸುಮಾರಿಗೆ ಅರಕೆರೆ ಶಾಂತಿನಿಕೇತನ ಬಡವಣೆಗೆ ಟ್ಯೂಷನ್ ಹೋಗಿ ಬರುತ್ತಿದ್ದ. ಅಂತೆಯೇ ಬುಧವಾರ ಸಂಜೆ ನಿಶ್ಚಿತ್ ಅರಕೆರೆಯ 80 ಫೀಟ್ ರಸ್ತೆ ಮೂಲಕ ಟ್ಯೂಷನ್​ಗೆ ಹೋಗಿದ್ದ. ಪ್ರತಿದಿನ 5 ಗಂಟೆಗೆ ಹೋಗಿ 7.30ಕ್ಕೆ ವಾಪಸ್ ಬರ್ತಿದ್ದ. ಆದರೆ ಅವತ್ತು ರಾತ್ರಿ 8 ಗಂಟೆಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಯಾದ ಪೋಷಕರು ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಟ್ಯೂಷನ್ ಟೀಚರ್​ ಕೇಳಿದಾಗ 7.30ಕ್ಕೆ ಇಲ್ಲಿಂದ ಹೋಗಿದ್ದಾರೆ ಎಂದಿದ್ದಾರೆ. ಆಗ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕರೆ ಮಾಡಿ ಕೇಳಿದ್ದಾರೆ. ಕೊನೆಗೆ ನೋಡಿದ್ರೆ ಅರಕೆರೆಯ ಪಾರ್ಕ್ ಬಳಿ ನಿಶ್ಚಿತ್ ಸೈಕಲ್ ಬಿದ್ದಿರೋದು ಪತ್ತೆಯಾಗಿದೆ. ಕೂಡಲೇ ಹುಳಿಮಾವು ಪೊಲೀಸರಿಗೆ ನಿಶ್ಚಿತ್ ತಂದೆ ಅಚ್ಯುತ್ ದೂರು ನೀಡಿದ್ದಾರೆ. ದೂರು‌ ನೀಡಿ ಮನೆಗೆ ಬಂದಾಗ ಅಪರಿಚಿತ ನಂಬರ್​ನಿಂದ ಕರೆ ಬಂದಿದೆ. 

ನಿಶ್ಚಿತ್ ತಂದೆ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ. ಕರೆ ಮಾಡಿದ ಅಪಹರಣಕಾರರು, ಐದು ಲಕ್ಷ ರೂಪಾಯಿಗಾಗಿ ಡಿಮ್ಯಾಂಡ್ ಮಾಡಿದ್ದಾರೆ. ಫೋನ್ ಬರುತ್ತಿದ್ದಂತೆಯೇ ಹೆದರಿದ ಪೋಷಕರು ಹುಳಿಮಾವು ಠಾಣೆಗೆ ಮತ್ತೆ ಓಡಿ ಬಂದಿದ್ದಾರೆ. ಅಪಹರಣಕಾರರಿಂದ ಮಗನ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಮುಂದೆ ಏನಾಯ್ತು..?

ಬೆನ್ನಲ್ಲೆ ಪೊಲೀಸರು ಕಿಡ್ನಾಪರ್ಸ್​​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಲೋಕೇಷನ್ ಟ್ರೇಸ್ ಮಾಡಿದ್ದಾರೆ. ಮತ್ತೊಂದು ಕಡೆ, ಪೋಷಕರು ಐದು ಲಕ್ಷ ರೂಪಾಯಿ ಹಣ ನೀಡಿ ಬಿಡಿಸಿಕೊಂಡು ಬರಲು ಮುಂದಾಗಿದ್ದರು. ಆದರೆ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಕಗ್ಗಲೀಪುರ ರಸ್ತೆಯ ನಿರ್ಜನ‌ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಮೊದಲಿಗೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಮತ್ತು ತಂಡ ಭೇಟಿ ನೀಡಿ ಪರಿಶಿಲನೆ ನಡೆಸಿದೆ. ಅಲ್ಲದೇ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ ಕೆ ಬಾಬಾ ಕೂಡ ಭೇಟಿ ನೀಡಿದ್ದರು. ಪ್ರಕರಣ ದೊಡ್ಡದಾಗುತ್ತಿದ್ದಂತೆಯೇ ಬೆಂಗಳೂರು ನಗರ ಪೊಲೀಸ್ ಜಂಟಿ ಆಯುಕ್ತ ರಮೇಶ್ ಬಾನೋತ್ ಕೂಡ ಸ್ಥಳಕ್ಕೆ ಹೋಗಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದರು. 

ಆರೋಪಿಗಳ ಬಂಧನ.. 

ಸದ್ಯ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಗುರುಮೂರ್ತಿ ಮತ್ತು ಗೋಪಾಲ್ ಕೃಷ್ಣ ಬಂಧಿತ ಆರೋಪಿಗಳು. ಕಗ್ಗಲಿಪುರ ರಸ್ತೆಯಲ್ಲಿ ಆರೋಪಿಗಳು ಇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಹುಳಿಮಾವು ಪೊಲೀಸ್ ಠಾಣಾ ಇನ್​ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್​ಐ ಅರವಿಂದ ಕುಮಾರ್ ನೇತೃತ್ವದ ತಂಡ ಸೆರೆ ಹಿಡಿಯಲು ಅಲ್ಲಿಗೆ ಹೋಗಿತ್ತು. ಆಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದ್ದಾರೆ. ಆಗ ಅನಿವಾರ್ಯವಾಗಿ, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. 6 ರೌಂಡ್ಸ್ ಗುಂಡು ಹಾರಿಸಿ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಗಾಯಾಳುಗಳನ್ನು ಜಯನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. 

ಪರಿಚಯಸ್ಥ ಈ ಗುರುಮೂರ್ತಿ

ಬಂಧಿತ ಗುರುಮೂರ್ತಿ ಬಾಲಕನ ಮನೆಯಲ್ಲಿ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದ. ಬಾಲಕನ ಕಿಡ್ನಾಪ್ ಮಾಡಿದ್ದೇ ಈ ಚಾಲಕ ಗುರುಮೂರ್ತಿ ಎಂದು ತಿಳಿದುಬಂದಿದೆ. ಗುರುಮೂರ್ತಿಯ ಎರಡೂ ಕಾಲಿಗೆ ಗುಂಡು ಹೊಡೆಯಲಾಗಿದೆ. 

ಅಧಿಕಾರಿಗಳು ಹೇಳಿದ್ದೇನು..?

ಘಟನೆ ಬಗ್ಗೆ ಮಾಹಿತಿ ನೀಡಿರುವ ಪೂರ್ವ ವಲಯ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್.. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಬಾಲಕ ಮಿಸ್ಸಿಂಗ್ ಆಗಿದ್ದಾನೆ. ಅರಕೆರೆ ಶಾಂತಿನಿಕೇತನ್ ಬಡಾವಣೆಯಿಂದ ಟ್ಯೂಷನ್​​ಗೆ ತೆರಳಿದ್ದ ಬಾಲಕ ನಾಪತ್ತೆ ಆಗಿದ್ದ. ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದೂರು ಆಧರಿಸಿ ಎಲ್ಲಾ ಕಡೆ ಬಾಲಕನಿಗಾಗಿ ಹುಡುಕಾಟ ನಡೆಸಿದ್ದೇವು. ನಿನ್ನೆ  ಮಧ್ಯಾಹ್ನ ಬನ್ನೇರುಘಟ್ಟ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಕಿಡ್ನಾಪ್ ಮಾಡಿ ಕೊಲೆ ಮಾಡಿರುವುದು ಬೆಳಕಿಗೆ. ಯಾವ ವಿಚಾರಕ್ಕೆ ಈ ಕೃತ್ಯ ನಡೆದಿದೆ ಅನ್ನೋದು ತನಿಖೆಯಿಂದ ತಿಳಿದುಬರಲಿದೆ ಅಂತ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *