ಪುತ್ತೂರಿನ ಇತಿಹಾಸ ಇರುವ ಕೊಂಬೆಟ್ಟು ಶಾಲೆಯ ರೂ. 1.25 ಕೋಟಿಯ ನೂತನ ಸಭಾಂಗಣಕ್ಕೆ ಶಿಲಾನ್ಯಾಸ

Share with

ಪುತ್ತೂರು: 109 ವರ್ಷಗಳ ಇತಿಹಾಸ ಇರುವ ಪಾರಂಪರಿಕ ಕಟ್ಟಡದಲ್ಲಿರುವ ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಆವರಣದಲ್ಲಿ ರೂ. 1.25 ಕೋಟಿಯ ನೂತನ ಸಭಾಂಗಣ ನಿರ್ಮಾಣಕ್ಕೆ ಅನುದಾನ ಕಡಿಮೆಯಾದರೆ ಶಾಸಕರ ನಿಧಿಯಿಂದಲೂ ಕೊಡುತ್ತೇನೆ ಎಂದು ಶಾಸಕ ಅಶೋಕ್‌ ಕುಮಾರ್ ರೈ ಅವರು ಭರವಸೆ ನೀಡಿದ್ದಾರೆ.

ಜೂ.8ರಂದು ಶಾಲೆಯಲ್ಲಿ ಶಿಲಾನ್ಯಾಸ ನೆರವೇರಿಸಿ ಬಳಿಕ ಅವರು ಮಾತನಾಡಿದರು.ಕೊಂಬೆಟ್ಟು ಜ್ಯೂನಿಯರ್ ಕಾಲೇಜು ರಾಜಮಾದರಿಯ ಶಾಲೆ. ಯಾಕೆಂದರೆ ಈ ಶಾಲೆಯಲ್ಲೇ ನಾನು ಕಲಿತ್ತಿದ್ದು, ಇದರ ಅಭಿವೃದ್ಧಿಗಾಗಿ ಕಾಲೇಜಿನ ಕಾರ್ಯಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮತ್ತು ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಜೋಕಿಂ ಡಿಸೋಜ ಪ್ರಯತ್ನ ಪಡುತ್ತಿದ್ದಾರೆ. ಈ ಹಿಂದೆ ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ ನೇತೃತ್ವದಲ್ಲಿ ಪ್ರೌಢಶಾಲೆಯ ಪುನರ್‌ನವೀಕರಣ ಕಾರ್ಯ ನಡೆಯಿತು.ಈಗೆಲ್ಲ ಕಾಂಕ್ರೀಟ್ ಶಾಲೆಗಳ ಕಟ್ಟಡಗಳು ಕಾಣಸಿಗುತ್ತವೆ. ಆದರೆ ರಾಜಮಾದರಿಯ ಶಾಲೆ ಪುತ್ತೂರಿನಲ್ಲಿ ಇರುವುದು ಕೊಂಬೆಟ್ಟಿನ ಜ್ಯೂನಿಯ‌ರ್ ಕಾಲೇಜು ಪ್ರೌಢಶಾಲೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದ ಅವರು ಇಲ್ಲಿ ದೊಡ್ಡ ಸಭಾಂಗಣ ಮಾಡಬೇಕೆಂದು ಎಲ್ಲರ ಬೇಡಿಕೆ ಬಂದಿತ್ತು. ಎಮ್.ಆರ್‌ಪಿಎಲ್ ಅವರ ಸಿಎಸ್‌ಆ‌ರ್ ಫಂಡ್ ಮೂಲಕ ಎರಡು ಪುತ್ತೂರಿನ ಶಾಲೆಗೆ ರೂ.2 ಕೋಟಿ ಅನುದಾನ ಕೇಳಿದ್ದೆ. ಅದರಲ್ಲಿ ಹಾರಾಡಿ ಶಾಲೆಗೆ ರೂ. 1 ಕೋಟಿ, ಜ್ಯೂನಿಯರ್ ಕಾಲೇಜು ಸಭಾಂಗಣಕ್ಕೆ ರೂ. 40ಲಕ್ಷ ಬಿಡುಗಡೆ ಮಾಡಿದ್ದು, ಇನ್ನು ರೂ. 40 ಲಕ್ಷವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡುತ್ತಾರೆ. ಅದೆ ರೀತಿ ಇತರ ಶಾಲೆಗಳಿಗೆ ರೂ.1.50 ಕೋಟಿ ಅನುದಾನ ಕೊಟ್ಟಿದ್ದಾರೆ.
ಶಾಲೆಯಲ್ಲಿ ಸಭಾಂಗಣ ನಿರ್ಮಾಣ ಮಾಡುವಾಗ ಅದರಲ್ಲಿ ಹೆಚ್ಚು
ಕಡಿಮೆ ಖರ್ಚು ಬಂದರೂ ಕೂಡಾ ವ್ಯವಸ್ಥಿತ ರೀತಿಯಲ್ಲಿ
ಮಾಡಬೇಕು. ಪ್ರಸಾದ್ ಕೌಶಲ್ ಶೆಟ್ಟಿ ಮತ್ತು ಜೋಕಿಂ ಡಿಸೋಜ
ಅವರು ಹೆಚ್ಚಿನ ಅನುಭವ ಪಡೆದಿದ್ದಾರೆ. ಇದರ ಜೊತೆ ಲೋಕೋಪಯೋಗಿ ಇಂಜಿನಿಯರ್ ಕನಿಷ್ಕ ಅವರು ಇದ್ದಾರೆ.
ಪಿ.ಜಿ.ಜಗನ್ನಿವಾಸ ರಾವ್ ಅವರು ಕೂಡಾ ಇಂಜಿನಿಯರ್ ಆಗಿದ್ದಾರೆ. ಹಾಗಿರುವಾಗ ಅವರ ಅನುಭವವನ್ನು ಪಡೆದು ಕೊಂಡು
ಕೆಲಸ ಮಾಡಬೇಕೆಂದರಲ್ಲದೆ ಕೆಲಸ ಮಾಡುವಾಗ ಬಜೆಟ್ ಇಲ್ಲ.
ಶಾರ್ಟ್ ಆಗಿದೆ ಅನ್ನುವ ವಿಚಾರ ಬೇಡ. ಅನುದಾನ ಕಡಿಮೆ ಆದರೆ ಶಾಸಕರ ನಿಧಿಯಿಂದ ಕೊಡಿಸುವಂತಹ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. ಒಟ್ಟಿನಲ್ಲಿ ಸಭಾಂಗಣ ಚಪ್ಪರ ಹಾಕಿದ ಹಾಗೆ ಆಗಬಾರದು. ತಾಂತ್ರಿಕ ಅನುಭವ ಪಡೆದುಕೊಂಡು ಮಾಡಿ ಎಂದರು.

ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಪ್ರಸಾದ್‌ ಕೌಶಲ್ ಶೆಟ್ಟಿ,ಪ್ರೌಢಶಾಲೆ ವಿಭಾಗದ ಕಾರ್ಯಾಧ್ಯಕ್ಷ ಜೋಕಿಂ ಡಿಸೋಜಾ, ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್,ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಸಂತ ಮೂಲ್ಯ, ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ, ಹಿರಿಯ ಶಿಕ್ಷಕ ಕೋಟಿಯಪ್ಪ ಪೂಜಾರಿ, ಎಸ್‌ಡಿಎಂಸಿ ಸದಸ್ಯರು ಸಹಿತ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *