ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಒಳರಸ್ತೆಗಳಲ್ಲಿ ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಾಡುಗೊಳ್ಳುತ್ತಿದ್ದು, ತೆರವುಗೊಳಿಸಲು ಪಂಚಾಯತ್ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮಣ್ಣಂಗುಳಿ ಮೈದಾನ ಪರಿಸರ, ನಯಬಜಾರ್-ಪ್ರತಾಪನಗರ ರಸ್ತೆಯ ಕುದುಕೋಟಿ ಸಹಿತ ವಿವಿಧ ಕಡೆಗಳಲ್ಲಿ ತ್ಯಾಜ್ಯಗಳು ತುಂಬಿಕೊಂಡಿರುವುದಾಗಿ ಸಾರ್ವಜನಿಕರು ಆರೋಪಿಸಲಾಗಿದೆ. ಕುದುಕೋಟಿ ರಸ್ತೆ ತನಕ ತ್ಯಾಜ್ಯ ರಾಶಿ ತಲುಪಿದೆ. ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ವಾಹನದ ಮೂಲಕ ವಿವಿಧ ಕಡೆಗಳಿಂದ ರಾತ್ರಿ ಹಾಗೂ ಮುಂಜಾನೆ ಹೊತ್ತಲ್ಲಿ ತಂದು ಎಸೆಯುತ್ತಿರುವುದಾಗಿ ಹೇಳಲಾಗುತ್ತಿದೆ.
ಭಾರೀ ಪ್ರಮಾಣದಲ್ಲಿ ತ್ಯಾಜ್ಯ ರಾಶಿಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ಶೋಚನೀಯವಸ್ಥೆಗೆ ತಲುಪಿದೆ. ತ್ಯಾಜ್ಯದಿಂದ ಸ್ಥಳೀಯರ ಸಹಿತ ಈ ದಾರಿಯಾಗಿ ನಡೆದು ಹೋಗುವವರಿಗೆ ದುರ್ವಾಸನೆಯಿಂದ ತೀರಾ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತ್ಯಾಜ್ಯ ತೆರವುಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.