
ಮಂಜೇಶ್ವರ :ಶತಮಾನೋತ್ಸವವನ್ನು ಪೂರೈಸಿ ನಾಡಿನ ಸಹಸ್ರಾರು ಮಂದಿಗೆ ವಿದ್ಯಾದಾನ ಮಾಡಿದ ಕುಂಜತ್ತೂರು ಎಲ್ ಪಿ ಶಾಲೆ ಇಂದು ಅವ್ಯವಸ್ಥೆಗಳ ಅಗರವಾಗಿ ಮಾರ್ಪಾಡಾಗಿದೆ.ಕಳೆದ ನೂರು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಿರುವ ಈ ಸಂಸ್ಥೆ ಇದೀಗ ಶಿಥಿಲಾವಸ್ಥೆಗೆ ತಲುಪಿರುವುದಾಗಿ ಊರವರು ಹೇಳುತಿದ್ದಾರೆ. ಈ ಶಾಲೆ ತನ್ನ ಸ್ಥಾಪನೆಯಾಗಿದಂದಿನಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿದ್ದು, ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ಗಳಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ, ಆಧುನಿಕ ಸೌಲಭ್ಯಗಳ ಕೊರತೆಯಿಂದ, ನಿರ್ವಹಣಾ ಸಮಸ್ಯೆಗಳಿಂದ ಮತ್ತು ಹಲವು ರೀತಿಯ ಅವ್ಯವಸ್ಥೆಗಳಿಂದಾಗಿ ಶಾಲೆಯ ಭವಿಷ್ಯ ಗಾಢವಾಗಿದೆ.
ಈ ಶಾಲೆಯ ಕಟ್ಟಡ ಸೋರುತಿದ್ದು ಮಕ್ಕಳು ಈಜು ಕೊಳದಲ್ಲಿ ಕಲಿಯಬೇಕಾದ ಪರಿಸ್ಥಿತಿ ಎದುರಾಗಿರುವುದಾಗಿ ವಾರ್ಡ್ ಸದಸ್ಯ ಮಾಹಿತಿ ನೀಡಿದ್ದಾರೆ. ಈ ಶಾಲೆಯಲ್ಲಿ 105 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿರುವುದಾಗಿ ಮುಖ್ಯೋಪಧ್ಯಾಯ ರಾಧಾ ಕೃಷ್ಣ ತಿಳಿಸಿದ್ದಾರೆ.ವಿಶೇಷ ಚೇತನ ಮಕ್ಕಳು ಶಾಲೆಗೆ ಬರಲು ಅಥವಾ ಏನಾದರೂ ಅವಘಡ ಸಂಭವಿಸಿದರೆ ಶಾಲೆಯ ಆವರಣಕ್ಕೆ ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕ ವಾಹನ ಅಥವಾ ಇನ್ಯಾವುದೋ ವಾಹನಗಳು ಬರುವ ದಾರಿಯನ್ನು ಮುಚ್ಚಿರುವುದಾಗಿ ವಾರ್ಡ್ ಸದಸ್ಯ ಆರೋಪಿಸಿದ್ದಾರೆ. ಮಕ್ಕಳ ಪ್ರತಿಭೆಯನ್ನು ಬಾಹ್ಯ ಜಗತ್ತು ಗುರುತಿಸಲು ಆಟದ ಮೈದಾನ ಇಲ್ಲದೇ ಇರುವುದು ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಇನ್ನಷ್ಟ ಸಂಕಷ್ಟಕ್ಕೀಡುಮಾಡಿದೆ.
ಶಾಲೆಯ ಆವರಣ ಗೋಡೆ ಕೂಡಾ ಕುಸಿದು ಬಿದ್ದಿದೆ. ಈ ಪರಿಸರದಲ್ಲಿ ವಿಷಪೂರಿತ ಹಾವುಗಳು ಕೂಡಾ ಕಂಡು ಬರುತ್ತಿರುವುದಾಗಿ ಪರಿಸರವಾಸಿಗಳು ಹೇಳುತಿದ್ದಾರೆ.
ಸಹಸ್ರಾರುಮಕ್ಕಳ ಭವಿಷ್ಯವನ್ನು ರೂಪಿಸಿದ ಈ ಶಾಲೆಯಲ್ಲಿ ಇತ್ತೀಚಿನ ಸಮಸ್ಯೆಗಳು ಸರಿಯಾಗಿ ಪರಿಹಾರವಾಗದಿರುವುದರಿಂದ ಮಕ್ಕಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆಯು ಈ ಬಗ್ಗೆ ತಕ್ಷಣ ಗಮನಹರಿಸಬೇಕಾಗಿರುವುದು ಅನಿವಾರ್ಯ ಎಂಬುದಾಗಿ ಸ್ಥಳೀಯರು ಹೇಳುತಿದ್ದಾರೆ.
ಶಾಲೆಯ ಅವ್ಯವಸ್ಥೆಗಳನ್ನು ಸರಿಪಡಿಸಲು ಮತ್ತು ಶೈಕ್ಷಣಿಕ ಮಟ್ಟವನ್ನು ಪುನಃ ಶ್ರೇಯಸ್ಕರಗೊಳಿಸಲು ತಕ್ಷಣ ಕ್ರಮಕೈಗೊಳ್ಳಬೇಕಾಗಿದೆ. ಈ ಶತಮಾನೋತ್ಸವ ಶೈಕ್ಷಣಿಕ ಸಂಸ್ಥೆಯು ಮತ್ತೆ ಸ್ತುತ್ಯರ್ಥ ಸಾಧನೆಗಳನ್ನು ಮಾಡಬೇಕು ಎಂಬುದು ನಾಡಿನ ವಿದ್ಯಾಭಿಮಾನಿಗಳ ಆಶಯ