ಬೆಂಗಳೂರು: ಕಲ್ಯಾಣ ಮಂಟಪಗಳಲ್ಲಿ ಸಂಬಂಧಿಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಅತಿಥಿ ಉಪನ್ಯಾಸಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ ರೇವತಿ (46) ಬಂಧಿತ ಆರೋಪಿ. ಆಕೆಯಿಂದ 32 ಲಕ್ಷ ರೂ. ಮೌಲ್ಯದ 262 ಗ್ರಾಂ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿ ಇತ್ತೀಚೆಗೆ ಬಸವನಗುಡಿಯ ಕಲ್ಯಾಣ ಮಂಟಪದಲ್ಲಿ ಚಿನ್ನಾಭರಣ ಕಳವು ಮಾಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದರು. ಕೆ.ಆರ್. ಪುರಂನಲ್ಲಿ ವಾಸವಾಗಿದ್ದ ರೇವತಿ ಬೆಳ್ಳಂದೂರಿನ ಖಾಸಗಿ ಕಾಲೇಜೊಂದರಲ್ಲಿ ಕನ್ನಡ ಅತಿಥಿ ಉಪನ್ಯಾಸಕಿಯಾಗಿದ್ದಾಳೆ.
6 ಪ್ರಕರಣ ದಾಖಲು
ಈಕೆಯ ಬಂಧನದಿಂದ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 3 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 3 ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು. ಠಾಣಾಧಿಕಾರಿ ಸವಿತಾ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
ಪತಿಗೆ ಅನಾರೋಗ್ಯ; ಚಿಕಿತ್ಸೆಗಾಗಿ ಕಳ್ಳತನ
ಆರೋಪಿ ರೇವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 12 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಪತಿ ಅನಾರೋಗ್ಯದಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಹೀಗಾಗಿ ಕಳ್ಳತನ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಕದ್ದ ಚಿನ್ನಾಭರಣಗಳನ್ನು ಕಾಡುಬೀಸನಹಳ್ಳಿಯಲ್ಲಿರುವ ಬ್ಯಾಂಕ್ನಲ್ಲಿ ಗಂಡ ಮತ್ತು ಆಕೆಯ ಹೆಸರಿನಲ್ಲಿ ಅಡಮಾನ ಇಟ್ಟು ಹಣ ಪಡೆದಿದ್ದರು.




