ಮಂಗಳೂರು: ಶ್ರೀ ರಾಮ ಜನ್ಮಸ್ಥಳ ಅಯೋಧ್ಯೆಯ ಮಂದಿರದಲ್ಲಿ ಜ.22ರಂದು ರಾಮಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು ಈ ಐತಿಹಾಸಿಕ ದಿನವನ್ನು ನಾವೆಲ್ಲರೂ ರಾಷ್ಟ್ರೀಯ ಉತ್ಸವವಾಗಿ ಆಚರಿಸೋಣ ಎಂದು ಬಿಜೆಪಿ ವಕ್ತಾರ ಜಗದೀಶ್ ಶೇಣವಾ ಅವರು ಹೇಳಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಗದೀಶ್ ಶೇಣವಾ ಅವರು ಶ್ರೀ ರಾಮ ಜನ್ಮಸ್ಥಳ ಅಯೋಧ್ಯೆಯ ಮಂದಿರದಲ್ಲಿ ಜ.22ರಂದು ರಾಮಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು ಈ ಐತಿಹಾಸಿಕ ದಿನವನ್ನು ನಾವೆಲ್ಲರೂ ರಾಷ್ಟ್ರೀಯ ಉತ್ಸವವಾಗಿ ಆಚರಿಸೋಣ ಎಂದು ಕರೆ ನೀಡಿದ್ದಾರೆ.
ಕೇಂದ್ರ ಸರಕಾರ ಈಗಾಗಲೇ ಮಧ್ಯಾಹ್ನವರೆಗೆ ರಜೆ ಸಾರಿದ್ದು, ರಾಜ್ಯ ಸರಕಾರವೂ ಸರಕಾರಿ ಸಂಸ್ಥೆ, ಶಿಕ್ಷಣ ಸಂಸ್ಥೆಗಳಿಗೆ ಜ.22ರಂದು ರಜೆ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು. ರಾಮ ಮಂದಿರಕ್ಕೆ ದೇಶಾದ್ಯಂತ ಭಕ್ತರಿಂದ 3,200 ಕೋಟಿ ರೂಪಾಯಿ ಅಧಿಕ ದೇಣಿಗೆ ಸಂಗ್ರಹವಾಗಿದೆ.
ಈಗಾಗಲೇ ದೇಶಾದ್ಯಂತ ಅಯೋಧ್ಯೆಯಿಂದ ಬಂದಂತಹ ಅಕ್ಷತೆ ಹಾಗೂ ರಾಮನ ಫೋಟೋ ಹಂಚುವ ಕಾರ್ಯನೂ ಮುಗಿದಿದ್ದು, ಮಹಾ ಉತ್ಸವಕ್ಕಾಗಿ ಅಂತಿಮ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕೇಂದ್ರ ಸರಕಾರ ಮಾತ್ರವಲ್ಲದೆ ದೊಡ್ಡ ದೊಡ್ಡ ಕಂಪನಿಗಳು ಈ ದಿನ ರಜೆ ಸಾರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟು ಬಂದ್ ಮಾಡಿ ಈ ಮಹೋತ್ಸವದಲ್ಲಿ ಪಾಲ್ಗೊಳ್ಳೋಣ ಎಂದು ಮನವಿ ಮಾಡಿದರು.
ರಾಮ ಮಂದಿರ ಬಗ್ಗೆ ಕೆಲ ಅತೃಪ್ತ ಆತ್ಮಗಳು ಮಾತನಾಡುತ್ತಿವೆ. ಪ್ರಚಾರಕ್ಕಾಗಿ ಕೆಲವರು ವಿರೋಧ ಮಾಡುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವಂತದ್ದೇನಿಲ್ಲ. ರಾಮ ಪ್ರತಿಷ್ಠಾ ಮಹೋತ್ಸವವನ್ನು ದೇಶ-ವಿದೇಶಗಳಲ್ಲಿ ಆಚರಿಸುತ್ತಿದ್ದು, 55 ದೇಶಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಇದು ಈ ಉತ್ಸವದ ಹಿಂದಿರುವ ಮಹತ್ವ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರರಾದ ರವಿ ಶಂಕರ್ ಮಿಜಾರ್, ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷರಾದ ಪ್ರಭಾ ಮಾಲಿನಿ, ಜಿಲ್ಲಾ ವಕ್ತರಾದ ರಾಧಕೃಷ್ಣ, ರಂದೀಪ್ ಕಾಂಚನ್ ಉಪಸ್ಥಿತರಿದ್ದರು.




