ಬೆಂಗಳೂರು: ಸಹ ಕಲಾವಿದೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ಮಡೆನೂರು ಮನು ಶನಿವಾರ ಬಿಡುಗಡೆ ಆಗಿದ್ದಾರೆ. ಶುಕ್ರವಾರ ಮನುಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಟರಾದ ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಕುರಿತು ಮಾತನಾಡಿರುವ ಆಡಿಯೊ ನನ್ನದಲ್ಲ. ಮೊದಲು ಶಿವಣ್ಣ ಅವರನ್ನು ಭೇಟಿ ಮಾಡಿ ನಡೆದ ಎಲ್ಲಾ ಘಟನೆ ತಿಳಿಸುತ್ತೇನೆ’ ಎಂದು ತಿಳಿಸಿದರು.
‘ಮೂರು ವರ್ಷಗಳ ನನ್ನ ಶ್ರಮವನ್ನು ಹಾಳು ಮಾಡಿದ್ದಾರೆ. ಐದಾರು ಮಂದಿ ನನ್ನ ವಿರುದ್ಧ ಪ್ರತಿ ಹಂತದಲ್ಲಿ ಸಂಚು ನಡೆಸಿದ್ದಾರೆ. ಸಿನಿಮಾ ಬಿಡುಗಡೆಗೂ ಮೊದಲೇ ಕುಣಿಗಲ್ ಬಳಿ ಮೊಟ್ಟೆಯಿಂದ ಹೊಡೆದು, ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದಿದ್ದರು. ಅವರೇ ಪ್ರಕರಣ ದಾಖಲಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ಕೋರ್ಟ್ ಮೇಲೆ ನಂಬಿಕೆ ಇದೆ’ ಎಂದರು.




